ಜನರ ಸೇವೆಗಾಗಿ ಇರುವ ರೋಟರಿ ಸಂಸ್ಥೆಯ ಕಾರ್ಯಗಳಿಗೆ ಸಾರ್ವಜನಿಕರು ಹಾಗೂ ಸದಸ್ಯರ ಸಹಕಾರ ಅಗತ್ಯ ಎಂದು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಎಸ್.ನಾರಾಯಣ್ ತಿಳಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ. ಶಂಕರಗೌಡ ಸಭಾಂಗಣದಲ್ಲಿ ರೋಟರಿ ಸಂಸ್ಥೆಯ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾರ್ಯಕ್ರಮ ಆಯೋಜಿಸಬೇಕಾದರೆ ಮನಸ್ಥಿತಿ ಹಾಗೂ ಆರ್ಥಿಕ ಸ್ಥಿತಿ ಚೆನ್ನಾಗಿರಬೇಕು. ಅದನ್ನು ಸರಿ ತೂಗಿಸಿಕೊಂಡು ಹೋಗಲು ಬಹಳ ತಾಳ್ಮೆ ಮುಖ್ಯ ಎಂದರು.
ಉಸಿರಾಟ ಆಡುವುದಕ್ಕೆ ಮುಂದೊಂದಿನ ಕೋಟ್ಯಾಂತರ ರೂಪಾಯಿ ಕೊಟ್ಟು ಗಾಳಿಯನ್ನು ತೆಗೆದುಕೊಳ್ಳುವ
ಪರಿಸ್ಥಿತಿ ಎದುರಾಗಬಹುದು.ಆದ್ದರಿಂದ ಪರಿಸರ,ವನ ರಕ್ಷಣೆ ಮಾಡಬೇಕು. ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಮರಗಿಡಗಳನ್ನು ಉಳಿಸುವಂತಹ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೋಟರಿ ಸಂಸ್ಥೆ ಮಾಡಲಿದೆ ಎಂದರು.
ಈಗಿನ ಮಕ್ಕಳು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಅವರಲ್ಲಿ ಅವೈಜ್ಞಾನಿಕತೆ ತುಂಬಿರುವುದು ಎದ್ದು ಕಾಣುತ್ತಿದೆ. ಆದ್ದರಿಂದ ಗ್ರಾಮೀಣ ಮತ್ತು ನಗರದ ಪ್ರದೇಶಗಳ ಶಾಲೆಗಳಲ್ಲಿ ಅಭಿವೃದ್ಧಿ ವಾತಾವರಣವನ್ನು ಸೃಷ್ಟಿಸಿ ಮಕ್ಕಳಿಗೆ ತರಬೇತಿ ನೀಡುವುದರ ಮುಖಾಂತರ ಅವರಿಗೆ ಶಿಕ್ಷಣ ನೀಡಬೇಕು ಎಂದರು.
ರಾಜ್ಯ ವಕೀಲರ ಸಂಘದ ಪರಿಷತ್ ಸದಸ್ಯರಾದ ವಿಶಾಲ್ ರಘು ರವರು ಮಾತನಾಡಿ, ರೋಟರಿ ಸಂಸ್ಥೆಗೆ 117 ವರ್ಷಗಳ ಇತಿಹಾಸವಿದೆ. ರೋಟರಿ ಎಂಬುದು 200 ದೇಶಗಳಲ್ಲಿ ಇದೆ ಎಂದರು.
ರೋಟರಿ ಸಂಸ್ಥೆ 46,000 ಕ್ಲಬ್ ಗಳಾಗಿ ಹೊರಹೊಮ್ಮಿದೆ.1.4 ಮಿಲಿಯನ್ ಸದಸ್ಯರುಗಳಿದ್ದಾರೆ. ಮಂಡ್ಯ ಸಂಸ್ಥೆಗೆ ಉತ್ತಮವಾದ 22 ಸದಸ್ಯರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಷಯ. ರೋಟರಿ ಸಂಸ್ಥೆಯು ತನ್ನದೇ ಆದ ಛಾಪು ಮೂಡಿಸಿಕೊಂಡಿದ್ದು, ಹಲವಾರು ಜನಪರ ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಮಾಡಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ರಾಜ್ಯಪಾಲರಾದ ಬಿ.ಎಲ್. ನಾಗೇಂದ್ರ ಪ್ರಸಾದ್, ವಲಯ ರಾಜಪಾಲರಾದ ಘನಶ್ಯಾಮ್ ದಾಸ್, ಸಹಾಯಕ ರಾಜ್ಯಪಾಲರಾದ ಬಿ.ಸಿ ವಿಜಯಕುಮಾರ್, ಐ ಬರ್ನಾಡಪ್ಪ , ಕೆ.ಎಂ ಶಿವಕುಮಾರ್ , ಬಿ.ಎಸ್ ಅನುಪಮ ಹಾಗೂ ಇತರರಿದ್ದರು.