ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ವಿಚಾರ ಅಂತಿಮವಾಗಿ ದೆಹಲಿಯ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಈಗಾಗಲೇ ವರದಿ ಸಹ ದೆಹಲಿಯ ಬಿಜೆಪಿ ಹೈಕಮಾಂಡ್ ಸೇರಿದೆ. ಕೆಲವೇ ದಿನಗಳಲ್ಲಿ ಎನ್ಡಿಎ ಅಭ್ಯರ್ಥಿಯನ್ನ ಘೋಷಣೆ ಮಾಡುತ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಜೆಪಿ ಭವನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಕುಮಾರಸ್ವಾಮಿ ಅವರ ಸ್ವ ಕ್ಷೇತ್ರ ಕಳೆದ ಎರಡು ಬಾರಿ ಜನ ಶಾಸಕರಾಗಿ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಹಾಗಾಗಿ ಪಕ್ಷದ ಧ್ವನಿಯಾಗಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಅತೀ ಶೀಘ್ರದಲ್ಲೇ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಉಪಚುನಾವಣೆ ಪ್ರಕಟವಾಗುತ್ತೆ. ಆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು,ಮುಖಂಡರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡಬೇಕು. ಅಲ್ಲಿನ ಕಾರ್ಯಕರ್ತರ ಬಯಕೆ ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ” ಎಂದರು.
ಚನ್ನಪಟ್ಟಣ ಜೆಡಿಎಸ್ನ ಭದ್ರಕೋಟೆ
ಚನ್ನಪಟ್ಟಣ ಕ್ಷೇತ್ರ ಟಿಕೆಟ್ ಗೊಂದಲ, ಕಾಂಗ್ರೆಸ್ಗೆ ಲಾಭ ಆಗುತ್ತಾ ಎಂಬ ವಿಚಾರದ ಕುರಿತು ಮಾತನಾಡಿ, “ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಪಕ್ಷದ ಭದ್ರಕೋಟೆ. ವರದೇಗೌಡರು ಇವತ್ತು ನಮ್ಮ ಜೊತೆಯಲಿಲ್ಲ. ಆದ್ರೆ ಅವರು ಪಕ್ಷದಲ್ಲಿ ಇದ್ದಂತಹ ಸಂದರ್ಭದಲ್ಲಿ ಪಕ್ಷಕ್ಕೆ ಜನ ಆಶೀರ್ವಾದ ಮಾಡಿದ್ದಾರೆ. ಜೊತೆಯಲ್ಲಿ ನಾಗರಾಜಣ್ಣ ನಮನ್ನ ಅಗಲಿದ್ದಾರೆ. ಸರಳ ವ್ಯಕ್ತಿಗೆ ಬೆಂಬಲ ನೀಡಿ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧೆ ಮಾಡಿದರೂ 55ರಿಂದ 6೦ ಸಾವಿರ ಜೆಡಿಎಸ್ ಮತಗಳಿವೆ” ಎಂದು ಹೇಳಿದರು.
“ಜೆಡಿಎಸ್ ಶಕ್ತಿ ಮತ್ತೊಂದು ಕಡೆ ಸಿ ಪಿ ಯೋಗಿಶ್ವರ್ ಅವರು ಸಹ ವೈಯಕ್ತಿಕ ವರ್ಚಸ್ಸು ಕ್ಷೇತ್ರದಲ್ಲಿ ಇಟ್ಟುಕೊಂಡಿದ್ದಾರೆ. ಇವೆಲ್ಲವನ್ನ ನೋಡಿದಾಗ ಕಾಂಗ್ರೆಸ್ಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ನೆಲೆ ಇಲ್ಲ. ಇತಿಹಾಸ ತೆಗೆದು ನೋಡಿದಾಗ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪ್ರಭಾವವಿಲ್ಲ” ಎಂದರು.
ಮೈಸೂರು ಪ್ರಾಂತ್ಯ ಅಷ್ಟೇ ಅಲ್ಲ, ಉತ್ತರ ಕರ್ನಾಟಕದ ಭಾಗದಲ್ಲಿ ನಮ್ಮ ಶಕ್ತಿ ಇದೆ
“ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಅವರ ನಾಯಕತ್ವದ ಶಕ್ತಿ ಹಳೆ ಮೈಸೂರು ಪ್ರಾಂತ್ಯ ಅಲ್ಲ. ಉತ್ತರ ಕರ್ನಾಟಕದಲ್ಲಿಯೂ ಬಿಜೆಪಿ ಜೆಡಿಎಸ್ ಕಾರ್ಯಕರ್ತ ಹೊಂದಾಣಿಕೆಯಿಂದ ದುಡಿದಿದ್ದಾರೆ. ಇವೆಲ್ಲಾ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿದ್ರು. ಅಲ್ಲಿ ಮುಖ್ಯವಾದ ಚರ್ಚೆ ಕುಮಾರಸ್ವಾಮಿ ಅವರನ್ನ ಯಾವ ರೀತಿ ಕಟ್ಟಿ ಹಾಕಬೇಕು ಅಂತ ಚರ್ಚೆ ಆಗಿದೆ” ಎಂದು ಹೇಳಿದರು.
ಮುಡಾ ಕೇಸ್ ಮುಚ್ಚಿಹಾಕಲು ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳ್ತಾರೆ
“ಗಣಿಗಾರಿಕೆ ಪ್ರಕರಣ ಸುಪ್ರೀಂಕೋರ್ಟ್ ಅಂಗಳಕ್ಕೆ ಹೋಗಿ 7 ವರ್ಷಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನ ಕೊಟ್ಟಿದೆ. ಲೋಕಾಯುಕ್ತ ಮತ್ತು ಎಸ್ಐಟಿಗೆ ಮೂರು ತಿಂಗಳ ಗಡುವಿನಲ್ಲಿ ವರದಿಯನ್ನ ಕೊಡಿ ಅಂತ ಕೇಳಿತ್ತು.ಅದರೆ ಯಾವುದೇ ರೀತಿಯ ವರದಿಗಳು ಬಂದಿಲ್ಲ” ಎಂದರು.
ಮುಡಾ ಹಗರಣ ಮುಚ್ಚಿಹಾಕಲು ಕಾಂಗ್ರೆಸ್ ಹೊಸ ಪ್ಲಾನ್
“ಕುಮಾರಸ್ವಾಮಿಯವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿರೋದು ಜನರನ್ನ ದಿಕ್ಕು ತಪ್ಪಿಸುವ ಕೆಲಸ ಅಷ್ಟೇ. ಇದರಿಂದ ಕುಮಾರಸ್ವಾಮಿರನ್ನ ಸಚಿವ ಸ್ಥಾನದಿಂದ ಇಳಿಸೋಕೆ ಸಾಧ್ಯವಿಲ್ಲ ನಾವು ಆತ್ಮವಿಶ್ವಸದಿಂದ ಹೇಳುತ್ತಿದ್ದೇವೆ, ಕುಮಾರಣ್ಣನವರು ಗಣಿಗಾರಿಕೆಗೆ ಸಹಿ ಹಾಕಿಲ್ಲ. ಮುಡಾ ಹಗರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಪ್ಲಾನ್ ಅಷ್ಟೇ” ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.