ಸಂವಿಧಾನದ ರಕ್ಷಣೆಗಾಗಿ ಕರ್ನಾಟಕ ರಾಜ್ಯವ್ಯಾಪಿ ಜೈಭೀಮ್ ಜನಜಾಗೃತಿ ಜಾಥಾವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆಯಲ್ಲಿ ನ.5ರಂದು ಬೆಳಿಗ್ಗೆ 11 ಗಂಟೆಗೆ ಬೈಕ್ ಮೆರವಣಿಗೆ ಹಾಗೂ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ ಎಂದು ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಬಸ್ತಿ ಪ್ರದೀಪ್ ಹೇಳಿದರು..
ಕೆ.ಆರ್.ಪೇಟೆ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಬಹುಜನರು ಸಭೆಯಲ್ಲಿ ಭಾಗವಹಿಸುವ ಮೂಲಕ ಜಹುಜನ ಸಮಾಜ ಪಾರ್ಟಿಯ ಜನಪರ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕೋಮುವಾಧಿ ಬಿಜೆಪಿ ಸರ್ಕಾರವು ಬಹುಜನರ ಹಿತವನ್ನು ಕಡೆಗಣಿಸಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದೆ. ಬಹುಸಂಖ್ಯಾತ ಹಿಂದುಗಳು ಮತ್ತು ಮುಸ್ಲಿಂ ಬಂಧುಗಳ ನಡುವೆ ವಿಶಜ್ವಾಲೆಯನ್ನು ಬಿತ್ತುವ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿಯು ದೂರಾಗಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿರುವ ಕೋಮುವಾಧಿ ಪಕ್ಷವಾದ ಬಿಜೆಪಿಯು ಜಾತಿಜಾತಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವಮಾನ್ಯವಾದ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಬದಲಿಗೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನದ ತಿದ್ದುಪಡಿ ಮಾಡಲು ಎಂಬ ಬೇಜವಾಬ್ಧಾರಿ ಹೇಳಿಕೆಯನ್ನು ನೀಡುತ್ತಿದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕೆಲಸ ಮಾಡದ ಬಿಜೆಪಿ ಸರ್ಕಾರವು ಜಾತಿ ಜಾತಿಗಳ ನಡುವೆ ವಿಷಬೀಜವನ್ನು ಬಿತ್ತುತ್ತಾ, ಮತೀಯ ಭಾವನೆಗಳನ್ನು ಕೆರಳಿಸುತ್ತಿದೆ. ರಾಜ್ಯದ ಜನತೆ ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದು ಬದಲಾವಣೆಯನ್ನು ಬಯಸಿದ್ದಾರೆ. ಸರ್ವ ಜನಾಂಗದ ತೋಟದ ಮಾದರಿಯಲ್ಲಿ ಹೊಂಗನಸನ್ನು ಹೊತ್ತು ರಾಜ್ಯದ ಸಮಗ್ರವಾದ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡಿರುವ ಬಹುಜನರ ಪಕ್ಷವಾದ ಬಿ.ಎಸ್.ಪಿ ಯನ್ನು ಹರಸಿ ಆಶೀರ್ವದಿಸುವ ಮೂಲಕ ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಬಿ.ಎಸ್.ಪಿ ಜಿಲ್ಲಾ ಉಸ್ತುವಾರಿ ಚೆಲುವರಾಜು ಮಾತನಾಡಿ, ಕ್ಷೇತ್ರದ ಶಾಸಕ ಹಾಗೂ ಸಚಿವ ನಾರಾಯಣಗೌಡ ಅವರು ಬಹುಜನರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಪರಿಶಿಷ್ಠ ಜಾತಿಯ ಜನರ ಮೇಲೆ ಸವರ್ಣೀಯರು ದಬ್ಬಾಳಿಕೆ ನಡೆಸಿ ದೌರ್ಜನ್ಯ ಮಾಡುತ್ತಿದ್ದರೂ, ದಲಿತರ ಹಿತವನ್ನು ಕಡೆಗಣಿಸಿರುವ ಸಚಿವರು ಮೇಳಗಳು, ಜಾತ್ರೆಗಳು ಹಾಗೂ ಶಿಬಿರಗಳನ್ನು ನಡೆಸಿ ತಾಲ್ಲೂಕಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಹರಿಹರಪುರ ಶಿವಕುಮಾರ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.