ನಾಡಿನ ಖ್ಯಾತ ಬರಹಗಾರರು, ವಿಚಾರವಾದಿಗಳು ಮತ್ತು ಶಿಕ್ಷಣ ತಜ್ಞರಿಗೆ ಬಲಪಂಥೀಯ ಸಂಘಟನೆಯವರು ಜೀವ ಬೆದರಿಕೆಯ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಹಾಗಾಗಿ ನಾಡಿನ 15ಕ್ಕೂ ಹೆಚ್ಚು ವಿಚಾರವಾದಿಗಳಿಗೆ ರಕ್ಷಣೆ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಯಾವೆಲ್ಲ ಲೇಖಕರು ಮತ್ತು ಬುದ್ಧಿಜೀವಿಗಳು ಬೆದರಿಕೆ ಎದುರಿಸುತ್ತಿದ್ದಾರೋ ಅವರಿಗೆಲ್ಲ ಭದ್ರತೆ ಒದಗಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಮತ್ತು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ರಾಜ್ಯ ಬಿಜೆಪಿ ಸರ್ಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮತ್ತು ಇತರ ಧಾರ್ಮಿಕ ಉಡುಪುಗಳ ನಿಷೇಧ ಹೇರಿದ್ದವು ಇದಕ್ಕೆ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದವು. ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಕಳವಳ ವ್ಯಕ್ತಪಡಿಸಿ 61 ಬುದ್ದಿಜೀವಿಗಳು ಬಹಿರಂಗ ಪತ್ರ ಬರೆದಿದ್ದರು.
ಆ ಬಳಿಕ ಅವರಿಗೆ ಬೆದರಿಕೆ ಪತ್ರಗಳು ಬರಲಾರಂಭಿಸಿದವು. ಸಾಹಿತಿಗಳಾದ ಎಸ್ ಜಿ ಸಿದ್ದರಾಮಯ್ಯ, ವಸುಂಧರಾ ಭೂಪತಿ, ಕುಂ ವೀರಭದ್ರಪ್ಪ, ಪ್ರಾಧ್ಯಾಪಕರಾದ ಮರುಳಸಿದ್ದಪ್ಪ ಮತ್ತು ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಅನೇಕರು ಕರ್ನಾಟಕ ಸರ್ಕಾರಕ್ಕೆ ಭದ್ರತೆ ಕೋರಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಈ ಹಿಂದೆ ರಾಜ್ಯದಲ್ಲಿ ಸಾಹಿತಿ ಎಂಎಂ ಕಲ್ಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಯಿತು. ಇದೀಗ ಹೋರಾಟಗಾರರಿಗೆ ಅದೇ ರೀತಿ ನಿಮ್ಮನ್ನು ಹತ್ಯೆ ಮಾಡಲಾಗುವುದು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಗುಂಡಿನ ದಾಳಿಯಲ್ಲಿ ಹಿರಿಯ ಸಂಶೋಧಕ, ಸಾಹಿತಿ ಎಂ.ಎಂ.ಕಲಬುರ್ಗಿ ಸಾವನ್ನಪ್ಪಿದ್ದರು. ಆಗಸ್ಟ್ 30, 2015 ರಂದು ಕರ್ನಾಟಕದ ಧಾರವಾಡ ಜಿಲ್ಲೆಯ ಅವರ ಮನೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಹಿಂದುತ್ವ ರಾಜಕಾರಣದ ವಿರುದ್ಧ ಕಟುವಾದ ಅಭಿಪ್ರಾಯಗಳಿಗೆ ಹೆಸರಾದ ಪತ್ರಕರ್ತೆ ಲಂಕೇಶ್ ಅವರನ್ನು ಬೆಂಗಳೂರಿನ ಅವರ ಮನೆಯಲ್ಲಿ ಸೆಪ್ಟೆಂಬರ್ 5, 2017 ರಂದು ಬಂದೂಕುಧಾರಿಗಳು ಹತ್ಯೆ ಮಾಡಿದರು.
ಎರಡೂ ಕೊಲೆ ಪ್ರಕರಣಗಳ ಚಾರ್ಜ್ಶೀಟ್ಗಳಲ್ಲಿ ಆರು ವ್ಯಕ್ತಿಗಳನ್ನು ಶಂಕಿತರೆಂದು ಪಟ್ಟಿ ಮಾಡಲಾಗಿದೆ. ಆದಾಗ್ಯೂ, ಕಲ್ಬುರ್ಗಿ ಪ್ರಕರಣದ ಆರೋಪಪಟ್ಟಿಯಲ್ಲಿ ಈ ವ್ಯಕ್ತಿಗಳು ಅನಾಮಧೇಯ ಸಂಘಟನೆಯಿಂದ ಬಂದವರು ಎಂದು ಹೇಳುತ್ತದೆ. ಆದರೆ ಲಂಕೇಶ್ ಹತ್ಯೆಯಲ್ಲಿ ದಾಖಲಾಗಿರುವವರು ಅವರನ್ನು ಹಿಂದುತ್ವ ಸಂಸ್ಥೆ ಸನಾತನ ಸಂಸ್ಥೆಯ ಸದಸ್ಯರು ಎಂದು ಹೆಸರಿಸಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರವು ಶಾಲಾ ಪಠ್ಯಪುಸ್ತಕಗಳ “ಕೇಸರಿಕರಣ”ವನ್ನು ವಿರೋಧಿಸಿದ ಸಿದ್ದರಾಮಯ್ಯ ಮತ್ತು ರಾಮಚಂದ್ರಪ್ಪ ಅವರಂತಹ ಸಾಹಿತಿಗಳ ಜತೆ ಒಡನಾಟ ಬೇಡ ಎಂಬ ಎಚ್ಚರಿಕೆ ಪತ್ರ ಬಂದಿತ್ತು ಎಂದು ಭೂಪತಿ ಪೊಲೀಸರಿಗೆ ದೂರು ನೀಡಿದ್ದರು.
ವೀರಭದ್ರಪ್ಪ ಅವರು “ಹಿಂದೂ ವಿರೋಧಿ” ಎಂದು ಆರೋಪಿಸಿ “ಅವರ ಅಂತ್ಯಕ್ರಿಯೆಗೆ ಸಿದ್ಧರಾಗಿ” ಎಂದು ಬೆದರಿಕೆಯ ಪತ್ರ ಬಂದಿತ್ತು ಎಂದು ಹೇಳಿದ್ದರು. ಪರಮೇಶ್ವರ್ ಅವರು ಶುಕ್ರವಾರ ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
”ಗೌರಿ ಲಂಕೇಶ್ ಮತ್ತು ಪ್ರೊಫೆಸರ್ ಕಲ್ಬುರ್ಗಿ ಅವರ ಹತ್ಯೆಯನ್ನು ನಾವು ಮರೆತಿಲ್ಲ. ಬರಹಗಾರರಿಗೆ ರಕ್ಷಣೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶನಿವಾರದ ಸಭೆಯಲ್ಲಿ ನಾವು ಬರಹಗಾರರಿಂದ ಎಲ್ಲಾ ವಿವರಗಳನ್ನು ಪಡೆಯುತ್ತೇವೆ” ಎಂದು ಅವರು ಹೇಳಿದ್ದಾರೆ.
ಜೂನ್ 2022 ರಿಂದ ತನಗೆ ಅಂತಹ 13 ಪತ್ರಗಳು ಬಂದಿವೆ ಎಂದು ಜಯಪ್ರಕಾಶ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
”ಪಠ್ಯಪುಸ್ತಕಗಳ ಪರಿಷ್ಕರಣೆಯಂತಹ ವಿಷಯಗಳಲ್ಲಿ ನಾವು ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡಿದಾಗ ನಮಗೆ ಬೆದರಿಕೆ ಪತ್ರಗಳು ಬರುತ್ತವೆ ರಾಜ್ಯದ ವಿವಿಧ ಭಾಗಗಳಿಂದ ಪತ್ರಗಳನ್ನು ಪೋಸ್ಟ್ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರವು ಜಾಗೃತ ತಂಡವನ್ನು ರಚಿಸಿತು. ಈಗಲೂ ನಮಗೆ ಅಂತಹ ಪತ್ರಗಳು ಬರುತ್ತಿವೆ. ಈ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸುತ್ತೇವೆ” ಎಂದರು.
ಇಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಪ್ರದೀಪ್ ಎಂಬಾತನನ್ನು ಪೊಲೀಸರು ಮೇ ತಿಂಗಳಲ್ಲಿ ಬಂಧಿಸಿದ್ದರು ಆದರೂ ಕೂಡ ಲೇಖಕರಿಗೆ ಪತ್ರಗಳು ಬರುತ್ತಲೇ ಇವೆ.