ರಾಷ್ಟ್ರೀಯ ಪಿಂಚಣಿ ಯೋಜನೆ (NPS )ಯಿಂದ ಸರ್ಕಾರಿ ನೌಕರರಿಗೆ ಆಗುತ್ತಿದ್ದು, ಇದನ್ನು ಕೈಬಿಟ್ಟು ಹಳೆ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೆ ತರುವಂತೆ ಮಾಡಲು ಸದನದಲ್ಲಿ ಹೋರಾಟ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್ (KPTCL)ನೌಕರರ ಸಂಘದ ವತಿಯಿಂದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನೌಕರರ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಈಗಿನ ಸರ್ಕಾರ ನೌಕರರ ವಿರೋಧಿಯಾಗಿದೆ, ಈ ಸಂದರ್ಭದಲ್ಲಿ ನಿಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತದೆ ಎಂಬ ನಂಬಿಕೆ ನಮಗಿಲ್ಲ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಜನಪರ ಕಾಳಜಿ ಹೊಂದಿರುವ ನಾಯಕರಾಗಿದ್ದಾರೆ. ಅವರಿಗೆ ನಿಮ್ಮ ಬೇಡಿಕೆಗಳನ್ನು ತಿಳಿಸಿ, ಎಲ್ಲರೂ ಒಟ್ಟಾಗಿ ಹೋರಾಡುತ್ತವೆ, ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಸುಮಾರು 73 ತಾಲೂಕುಗಳಲ್ಲಿ ಈಗಾಗಲೇ ಓ ಪಿ ಎಸ್ ಸಂಕಲ್ಪ ಯಾತ್ರೆ ನಡೆದಿದೆ. ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದು ತುಂಬಾ ಅನ್ಯಾಯ ಮಾಡಲಾಗಿದೆ. ಇಂತಹ ವಂಚನೆಯ ಯೋಜನೆಯನ್ನು ಸರ್ಕಾರ ಕೂಡಲೇ ಹಿಂದಕ್ಕೆ ಪಡೆದು, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಹಳೆ ಪಿಂಚಣಿ ಯೋಜನೆ ಜಾರಿಗೆ ತರುವವರಿಗೆ ನಮ್ಮ ಮತ ನೀಡುತ್ತೇವೆ ಎಂದು ಸಂಘದಲ್ಲಿ ನಿರ್ಣಯಿಸಲಾಗಿದೆ ಎಂದು ನೌಕರರು ತಿಳಿಸಿದರು
ಕಳೆದ ನ.13ರಂದು ದಾವಣಗೆರೆಯಲ್ಲಿ vote for OPS ಅಭಿಯಾನಕ್ಕೆ ಸಂಘ ಕರೆ ನೀಡಿತ್ತು. ಅದರಂತೆ ಪ್ರತಿ ಕ್ಷೇತ್ರದ ಶಾಸಕರು ನಮ್ಮ ಪ್ರಮುಖ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೆ ತರಲು ಕೈ ಜೋಡಿಸಬೇಕು ಎಂದು ಮನವಿ ಮಾಡಲಾಗಿದೆ. ಯಾರು ನಮ್ಮ ಮನವಿ ಸ್ವೀಕರಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ಹೋರಾಟ ಮಾಡುತ್ತಾರೋ ಅವರಿಗೆ ನಮ್ಮ ಮತ ಎಂದು ನಮ್ಮ ಸಂಘಟನೆ ನಿರ್ಧರಿಸಿದೆ ಎಂದರು.