-
ಒಕ್ಕಲಿಗರಿಗೆ ಸಾಮಾಜಿಕ ನ್ಯಾಯ ಒದಗಿಸಲು ಆಗ್ರಹ
- ನ.4ರಂದು ಸಮುದಾಯದ ಸ್ವಾಮೀಜಿಗಳಿಂದ ಮುಖ್ಯಮಂತ್ರಿಗೆ ಮನವಿ
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಒಕ್ಕಲಿಗರ ಜನಸಂಖ್ಯೆ ಆಧಾರಿಸಿ ಶೇ.4ರಷ್ಟಿರುವ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ನ.3ರಿಂದ ಮಂಡ್ಯದಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ವರೆಗೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.20ರಷ್ಠಿರುವ ಒಕ್ಕಲಿಗ ಸಮುದಾಯಕ್ಕೆ ಹಾಲಿ ಶೇ.4 ರ ಮೀಸಲಾತಿ ಒದಗಿಸಿದ್ದು, ಇದನ್ನು ಕನಿಷ್ಠ 12 ಕ್ಕೆ ಏರಿಸಬೇಕು ಎಂದು ಆಗ್ರಹಿಸಿ ರಾಜ್ಯದ್ಯಾಂತ ಈಗ ಕೂಗು ಎದ್ದಿದೆ, ಒಕ್ಕಲಿಗರು ಬರುವ ಪ್ರ ವರ್ಗ 3 ಎ ನಲ್ಲಿ ಕೊಡವ, ಬಂಟ, ರೆಡ್ಡಿ ಮತ್ತು ಬಲಿಜ ಜಾತಿಗಳು ಸೇರಿವೆ, ಈ ಸಮೂಹಕ್ಕೆ ಮೀಸಲಾಗಿರುವ ಶೇ.4ರ ಮೀಸಲಾತಿಯಲ್ಲಿ ಒಕ್ಕಲಿಗರಿಗೆ ಸಿಕ್ಕುವುದು ಕೇವಲ ಶೇ.1.5 ಮಾತ್ರ, ಆ ಕಾರಣದಿಂದ ಒಕ್ಕಲಿಗ ಜನಾಂಗದ ಜನಸಂಖ್ಯೆ ಆಧಾರಿಸಿ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೆಕೆಂದು ಆಗ್ರಹಿಸಿದರು.
ಇದುವರಗೆ ಉದ್ಯೋಗ ಹಾಗೂ ರಾಜಕೀಯ ಕ್ಷೇತದಲ್ಲೂ ಒಕ್ಕಲಿಗರಿಗೆ ನ್ಯಾಯ ದೊರೆತಿಲ್ಲ, ಇನ್ನಾದರೂ ಒಕ್ಕಲಿಗ ಜನಾಂಗದ ಶ್ರೇಯೊಭಿವೃದ್ದಿ ಪರಿಗಣಿಸಿ ಕನಿಷ್ಠ ಶೇ.12 ರ ಮೀಸಲಾತಿ ನೀಡಬೇಕೆಂದು ಸರ್ಕಾರಗಳನ್ನು ಆಗ್ರಹಿಸಿದ್ದರು ನ್ಯಾಯ ದೊರೆದಿಲ್ಲ ಎಂದು ಹೇಳಿದರು.
ಮಂಡ್ಯ ನಗರದಲ್ಲಿ ನ.3ರಂದು ಬೆಳಿಗ್ಗೆ 11 ಗಂಟೆಗೆ ಕೆ.ವಿ.ಶಂಕರೇಗೌಡರ ಪ್ರತಿಮೆ ಮತ್ತು ವಿಶ್ವಮಾನವ ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಜಯ ವೃತ್ತದಿಂದ ಹೊರಡುವ ರ್ಯಾಲಿಯು ಮಾರ್ಗ ಮಧ್ಯೆ ಹನಕೆರೆ, ಬೂದನೂರು, ಗೆಜ್ಜಲಗೆರೆ, ಚನ್ನೇಗೌಡನೊಡ್ಡಿ ಗಳಲ್ಲಿ ಜಾಗೃತಿ ಸಭೆ ನಡೆಸಲಿದೆ ಎಂದರು.
ನಂತರ ಮದ್ದೂರಿನ ಎಚ್.ಕೆ.ವೀರಣ್ಣಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರವಾಸಿಮಂದಿರ ವೃತ್ತದಲ್ಲಿ ಜಾಗೃತಿ ಸಭೆ ನಡೆಸಿ, ಸಂಜಯವೃತ್ತ ಶಿಂಷಾ ಬ್ಯಾಂಕ್, ಗೊರವನಹಳ್ಳಿ ಸರ್ಕಲ್, ಟಿಪಿಸಿಎಮ್ಎಸ್ ಹಾಗೂ ಕೆಮ್ಮಣ್ಣುನಾಲೆ ವೃತ್ತ ದಲ್ಲಿ ಜಾಗೃತಿ ಸಭೆ ನಡೆಸಿ, ಪೇಟೆ ಬೀದಿ ಹೂವಿನ ಸರ್ಕಲ್, ಮಹಾವೀರ ಚಿತ್ರಮಮದಿರ ಹಾಗೂ ಕೊಪ್ಪ ಸರ್ಕಲ್ ಮತ್ತು ಶಿವಪುರ ತಿಮ್ಮದಾಸ್ ಹೊಟೆಲ್ ಸರ್ಕಲ್, ಸೊಮನಹಳ್ಳಿ, ರುದ್ರಾಕ್ಷಿಪುರ ಹಾಗೂ ನಿಡಘಟ್ಟದಲ್ಲಿ ಜಾಗೃತಿ ಸಭೆ ನಡೆಸಲಿದ್ದು, ನಂತರ ಚನ್ನಪಟ್ಟಣದಲ್ಲಿ ವಾಸ್ತವ್ಯ ಹೂಡಲಿದೆ. ನ.4ರಂದು ಬೆಳಿಗ್ಗೆ ಚನ್ನಪಟ್ಟಣದಿಂದ ಮತ್ತೆ ರ್ಯಾಲಿ ಪ್ರಾರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಬೆಂಗಳೂರಿನ ಪ್ರೀಡಂ ಪಾರ್ಕ್ ತಲುಪಿ, ಸಮುದಾಯದ ಸ್ವಾಮೀಜಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಬಾಣಸವಾಡಿ ನಾಗಣ್ಣ, ಕೃಷ್ಣ, ಬೋರೇಗೌಡ, ಯರಗನಹಳ್ಳಿ ಮಹಾಲಿಂಗು, ನಂದನ್ ಗೌಡ, ಅಂಜನಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.