ಕದಸಂಸ ರಾಜ್ಯ ಸಮ್ಮೇಳನ ಮತ್ತು ನೂತನ ರಾಜಕೀಯ ಪಕ್ಷದ ಉದ್ಘಾಟನಾ ಸಮಾರಂಭವು ಸೆ.14 ರಂದು ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಾ. ಎನ್.ಮೂರ್ತಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಮತ್ತು ದೇಶದ ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಬಹುಜನರ ರಾಜಕೀಯ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಸ್ಥಾನಮಾನ, ಸಮಾನತೆಗಾಗಿ ಹಲವಾರು ಗೊತ್ತುವಳಿಗಳನ್ನು ಅಂಗೀಕರಿಸಲಾಗುವುದು ಎಂದರು.
ಅಂದು ನೂತನ ರಾಜಕೀಯ ಪಕ್ಷದ ಹೆಸರು, ಚಿಹ್ನೆ, ಬಾವುಟಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ವ್ಯಾಪಕ ಪ್ರಚಾರವನ್ನು ಈಗಾಗಲೇ 22 ಜಿಲ್ಲೆಗಳಲ್ಲಿ ನಡೆಸಲಾಗಿದ್ದು, ಇನ್ನುಳಿದ ಜಿಲ್ಲೆಗಳಿಗೂ ಸದ್ಯದಲ್ಲೇ ಹೋಗುತ್ತಿದ್ದೇವೆ ಎಂದರು.
ನಮ್ಮ ರಾಜಕೀಯ ಪಕ್ಷವು ರಾಷ್ಟ್ರೀಯ ಪಕ್ಷವಾಗಿದೆ. ಚುನಾವಣೆ ಆಯೋಗದಿಂದ ನೋಂದಾವಣಿಗೊಂಡಿದ್ದು, ಪಕ್ಷ ರಚನೆ ಪೂರ್ವದಲ್ಲಿ ಕಳೆದ ಮೂರು ವರ್ಷಗಳಿಂದ ರಾಜ್ಯ ಸೇರಿದಂತೆ ದೇಶದ 15 ರಾಜ್ಯಕ್ಕೂ ಹೆಚ್ಚು ಸಮಾನ ಮನಸ್ಕ ಸಂಘಟನೆಗಳು ಹಾಗೂ ಬುದ್ಧಿ ಜೀವಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ನಂತರ ದೇಶವನ್ನಾಳಿದ ಕಾಂಗ್ರೆಸ್, ಬಿಜೆಪಿ ಇತರೆ ಪಕ್ಷಗಳು ದೇಶ ಮತ್ತು ಜನರ ಹಿತವನ್ನು ಕಾಪಾಡುವಲ್ಲಿ ವಿಫಲವಾಗಿವೆ. ರೈತರು, ಕೂಲಿಕಾರ್ಮಿಕರು, ದುರ್ಬಲರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಎಲ್ಲ ಪ್ರಗತಿಪರರು, ಹೋರಾಟಗಾರರು ಹಾಗೂ ಸಮಿತಿಯ ಎಲ್ಲ ಮುಖಂಡರು ಆಗಮಿಸಬೇಕು ಎಂದು ಮನವಿ ಮಾಡಿದರು.
ಸಮಿತಿಯ ಬೈಲಹೊನ್ನಯ್ಯ, ಕೋದಂಡರಾಮು, ಲಕ್ಷ್ಮೀನಾರಾಯಣ್, ಬೋರಲಿಂಗರಾಜು ಗೋಷ್ಠಿಯಲ್ಲಿದ್ದರು.
.