ಜಿಲ್ಲೆಯಲ್ಲಿ ಜ.15 ರಂದು ಬೆಳಿಗ್ಗೆ 7 ಗಂಟೆಯಿಂದ 7.45 ರವರೆಗೆ ಪಿ.ಇ.ಟಿ ಕ್ರಿಕೆಟ್ ಮೈದಾನದಲ್ಲಿ ಯೋಗಾಥಾನ್ ನಡೆಯಲಿದೆ. ಈ ಕಾರ್ಯಕ್ರಮ ಗಿನ್ನೀಸ್ ಬುಕ್ ಆಫ್ ರೆಕಾಡ್೯ ನಲ್ಲಿ ದಾಖಲೆಯಾಗಲಿದ್ದು, ಕಾರ್ಯಕ್ರಮಕ್ಕೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಗೆ 10,000 ಜನ ಭಾಗವಹಿಸುವಂತೆ ಗುರಿ ನಿಗದಿಯಾಗಿದ್ದು, 13 ವರ್ಷ ಮೇಲ್ಪಟ್ಟವರು ಜನವರಿ 11 ವರೆಗೆ www.yogathon2022.com ನಲ್ಲಿ ನೊಂದಣಿ ಮಾಡಿಕೊಂಡು ನೀಡಲಾಗುವ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿಸಿ ಜನವರಿ 15 ರಂದು ಯೋಗಾಥಾನ್ ಗೆ ಪ್ರವೇಶಿಸುವುದು ಎಂದರು.
ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾಡಲಾಗಿದ್ದ ಆಸನಗಳನ್ನು ಯೋಗಥಾನ್ ನಲ್ಲಿ ಮಾಡಲಾಗುವುದು. ನೊಂದಾಯಿಸಿಕೊಂಡವರು ಜನವರಿ 13 , 14 ರಂದು ನಡೆಯುವ ಪೂರ್ವಾಭ್ಯಾಸಕ್ಕೆ ಹಾಗೂ ಜನವರಿ 15 ರಂದು ನಡೆಯುವ ಯೋಗಾಥಾನ್ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಶಾಲಾ, ಕಾಲೇಜು, ವಸತಿ ಶಾಲೆಗಳಿಂದ ನೊಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಿ ಎಂದರು.
ಮುಖ್ಯ ವೇದಿಕೆ ಹಾಗೂ 1000 ಜನಕ್ಕೆ ಒಬ್ಬರು ತರಬೇತುದಾರರಿಗೆ ಒಂದು ವೇದಿಕೆಯಂತೆ 10 ವೇದಿಕೆ ನಿರ್ಮಾಣವಾಗಬೇಕು 10,000 ಸಾವಿರ ಜನ ಯೋಗ ಮಾಡಲಿದ್ದು, ಪ್ರತಿಯೊಬ್ಬರಿಗೂ ಯೋಗ ಮಾಡಲು ಬೇಕಿರುವ ಸ್ಥಳದ ಗುರುತು ಮಾಡಬೇಕು. ಯೋಗ ಗುರು ಶಂಕರ ನಾರಾಯಣ ಶಾಸ್ತ್ರಿ ಅವರು ಯೋಗ ಕಾರ್ಯಕ್ರಮ ನಡೆಸಿಕೊಡಲಿದ್ದು, ಕ್ರೀಡಪಟು, ಧರ್ಮಗುರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಎಂದರು.
ಪಾರ್ಕಿಂಗ್, ಕುಡಿಯುವ ನೀರು, ಶೌಚಾಲಯ, ವೇದಿಕೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಿ ಜವಾಬ್ದಾರಿಗಳನ್ನು ವಹಿಸಿ. 7 ರಿಂದ 8 ಎಂಟ್ರಿ ಗೇಟ್ ಗಳ ವ್ಯವಸ್ಥೆ ಮಾಡಿ ಇದರಿಂದ ಜನ ಸಂದಣಿ ಉಂಟಾಗುವುದು ಕಡಿಮೆಯಾಗುತ್ತದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ ಸೀತಾಲಕ್ಷ್ಮಿ ಬಿ.ಎಸ್, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್ ನಿರ್ಮಲ, ಬಿಇಓ ಸೌಭಾಗ್ಯ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು