ಮಂಡ್ಯ ವಿಶ್ವವಿದ್ಯಾಲಯ ಉನ್ನತ ಮಟ್ಟಕ್ಕೇರಲು ಸರ್ಕಾರದಿಂದ ಎಲ್ಲಾ ರೀತಿಯಲ್ಲೂ ಸಹಕರಿಸಲಾಗುವುದು. ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ತರುವ ಪ್ರಯತ್ನ ಮಾಡುತ್ತೇನೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ತಿಳಿಸಿದರು.
ಮಂಡ್ಯ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಆ್ಯಪಲ್ ಲ್ಯಾಬ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ವಿಶ್ವವಿದ್ಯಾಲಯದಲ್ಲಿ ಉದ್ಘಾಟನೆಗೊಂಡ ಆ್ಯಪಲ್ ಲ್ಯಾಬ್ ಕರ್ನಾಟಕದಲ್ಲೇ ಮೊದಲನೆಯದಾಗಿದೆ. ನಾನು ಕೂಡ ಮೊದಲ ಬಾರಿಗೆ ಶಾಸಕನಾಗಿ ಇದನ್ನ ಉದ್ಘಾಟನೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು.
ಮಂಡ್ಯ ವಿಶ್ವವಿದ್ಯಾಲಯ ತಂತ್ರಜ್ಞಾನದಲ್ಲಿ, ಪಕ್ಕದ ಜಿಲ್ಲೆಯ ವಿಶ್ವವಿದ್ಯಾಲಯಕ್ಕಿಂತ ಸುಸಜ್ಜಿತವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಹಕರಿಸುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಜಿಲ್ಲೆ ಹಾಗೂ ವಿಶ್ವವಿದ್ಯಾಲಯಕ್ಕೆ ಘನತೆ ತರಬೇಕು ಎಂದರು.
ವಿದ್ಯಾರ್ಥಿಗಳಿಗೆ ಗುರಿ ಮತ್ತು ಗುರು ಎರಡು ಇದ್ದರೆ ಏನಾದರೂ ಸಾಧನೆ ಮಾಡಬಹುದು. ತಂದೆ ತಾಯಿ ಒಳ್ಳೆದಾಗಲಿ ಎಂದು ಬಯಸಿದರೆ, ಗುರುಗಳು ನಮ್ಮ ಜೀವನಕ್ಕೆ ದಾರಿ ತೋರಿಸುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸಿ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿರುವ ಸುಸಜ್ಜಿತವಾದ ಆ್ಯಪಲ್ ಲ್ಯಾಬ್ ನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಶಕ್ತೀಕರಣಗೊಳಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಆ್ಯಪಲ್ ಲ್ಯಾಬ್ ಶ್ರಮಿಸುತ್ತದೆ, ವಿದ್ಯಾರ್ಥಿಗಳು ಬಳಸಿಕೊಳ್ಳಿ ಸಲಹೆ ನೀಡಿದರು. ನಂತರ ಶಾಸಕ ಪಿ.ರವಿಕುಮಾರ್ ಅವರಿಗೆ ವಿಶ್ವವಿದ್ಯಾಲಯದ ಬೇಡಿಕೆಗಳನ್ನು ಪೂರೈಸಲು ಮನವಿ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜೀವ್.ಪಿ ಮತ್ತು ಫಣೀಂದರ್ ಅವರು ಉನ್ನತೀಕರಿಸಿದ ಆ್ಯಪಲ್ ಲ್ಯಾಬ್ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ನಾಗರಾಜ್ ಜಿ.ಜೋಳ್ಳಿ, ಡಾ.ರಂಗರಾಜು, ಸಿಂಡಿಕೇಟ್ ಸದಸ್ಯರಾದ ನಾಗರಾಜು, ಬಸವರಾಜ್ ಎತ್ನಳ್ಳಿ, ಆ್ಯಪಲ್ ಇನ್ಫೊಟೆಕ್ನ ಮೋಹಿತ್ ಹೆಗ್ಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.