✍🏽 ಚಂದ್ರಪ್ರಭ ಕಠಾರಿ
ದಲಿತ ಸಂವೇದನೆಯ ಪೂರ್ಣ ಚಿತ್ರಗಳು ಮರಾಠಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬರುತ್ತಿರುವಾಗ ನಮ್ಮ ಕನ್ನಡ ಚಿತ್ರರಂಗ ಏಕೆ ಈ ಬಗ್ಗೆ ಚಿಂತಿಸುತ್ತಿಲ್ಲವೆಂದು ಹಲವಾರು ಬಾರಿ ಅನಿಸಿದ್ದುಂಟು. ಈಗ ಜೀವಾ ನವೀನ್ ನಿರ್ದೇಶನದಲ್ಲಿ ‘ಪಾಲಾರ್’ ಸಿನಿಮಾ ಬರುತ್ತಿರುವುದು ಸಮಾಧಾನದ ವಿಷಯ. ನೆನ್ನೆ ಆ ಸಿನಿಮಾದ ಪ್ರೀಮಿಯರ್ ಶೊ ಬೆಂಗಳೂರಿನ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿತು. ಸಿನಿಮಾ ಗೆಳೆಯರಾದ ನಾಗರಾಜ ಶೆಟ್ಟಿ ಮತ್ತು ಕೃಷ್ಣಪ್ರಸಾದ್ ಅವರೊಂದಿಗೆ ಸಿನಿಮಾ ನೋಡಿದೆ. ಕತೆ, ಚಿತ್ರಕತೆ, ಸಂಭಾಷಣೆಯನ್ನು ಬರೆದಿರುವ ಜೀವಾ ನವೀನ್ ಅವರ ಪಾಲಾರ್ ಸಿನಿಮಾ ಪ್ರೇಕ್ಷಕರ ಬುದ್ಧಿಭಾವವನ್ನು ಒಮ್ಮೆಗೆ ಕಲಕಿಬಿಡುವಷ್ಟು ಸಶಕ್ತವಾಗಿದೆ.
ತಮ್ಮ ಪ್ರಥಮ ಸಿನಿಮಾದಲ್ಲಿ ಜೀವಾ ನವೀನ್ ಅವರು ನಿರ್ದೇಶನದಲ್ಲಿ ಗೆದ್ದಿದ್ದಾರೆ. ಹಳ್ಳಿಯ ದಲಿತರ ಬದುಕನ್ನು ಹಲವು ನೆಲೆಗಳಲ್ಲಿ ಚಿತ್ರ ಕಟ್ಟಿಕೊಡುತ್ತದೆ. ಪಾಲಾರ್ ಸಿನಿಮಾ ನಡೆಯುವುದು ಅವಿಭಜಿತ ಕೋಲಾರ ಜಿಲ್ಲೆಯಲ್ಲಿಯಾದ್ದರಿಂದ ಆ ನೆಲದ ಸೊಗಡಿನ ಹರಿತ ಕನ್ನಡ ಸಂಭಾಷಣೆ ಚಿತ್ರದ ಜೀವಾಳ. ಪಾತ್ರವರ್ಗದಲ್ಲಿ ಎಲ್ಲರೂ ಸಹಜವಾಗಿ ನಟಿಸಿದ್ದಾರೆ. ಅದರಲ್ಲೂ ವೈ ಜಿ. ಉಮಾ ಅವರ ನಟನೆ ಚಿತ್ರದ ಹೆಗ್ಗಳಿಕೆ.
ತಮಿಳಿನ ಖ್ಯಾತ ನಿರ್ದೇಶಕ ಪಾ ರಂಜಿತ್ ಟ್ರೈಲರ್ ಬಿಡುಗಡೆ ಮಾಡಿದ್ದರು. ಅದಕ್ಕೂ ಮೊದಲು ಚಿತ್ರದ ಕಂಟೆಂಟ್ ಬಗ್ಗೆ ಭಯ ಬಿದ್ದೊ ಏನೋ, ದಲಿತರ ನೋವಿನ ಕಥೆಯನ್ನು ಒಳಗೊಂಡ ‘ಪಾಲಾರ್’ ಸಿನಿಮಾದ ಟ್ರೇಲರ್ ಬಿಡುಗಡೆಗೆ ಆಡಿಯೊ ಕಂಪನಿಗಳು ಮುಂದೆ ಬರುತ್ತಿಲ್ಲವೆಂದು ಸಿನಿಮಾದ ನಿರ್ದೇಶಕ ಜೀವಾ ನವೀನ್ ಬೇಸರ ವ್ಯಕ್ತಪಡಿಸಿದ್ದು, ಕೇವಲ ವ್ಯಾಪಾರಿ ಮನೋಭಾವದ ಕನ್ನಡ ಚಿತ್ರರಂಗದ ಮನಸ್ಥಿತಿಗೆ ಹಿಡಿದ ಕನ್ನಡಿ.
ಅದೇನೇ ಇರಲಿ….ಚಿತ್ರ ಮುಂದಿನ ತಿಂಗಳು ಬೆಳ್ಳಿತೆರೆಗೆ ಬರಬಹುದು. ಸಂವೇದನಾಶೀಲ ಕನ್ನಡಿಗರು ಈ ಚಿತ್ರವನ್ನು ನೋಡಬೇಕು. ಮುಂದೆ ಇಂಥ ದಲಿತರ ಕತೆಗಳು ತೆರೆಗೆ ಬರಲು ಕಾರಣವಾಗಬೇಕು.