ಪಂಚರತ್ನ ರಥಯಾತ್ರೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಪಂಚರತ್ನ ರಥಯಾತ್ರೆಯ ಸಂಬಂಧ ಇಂದು ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ಸಭೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಿ.ಫಾರಂ ಪ್ರಬಲ ಆಕಾಂಕ್ಷಿಯಾಗಿರುವ ಮನ್ ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಅವರಿಗೆ ಆಹ್ವಾನವಿರದ ಕಾರಣ ಅವರು ಪೂರ್ವಭಾವಿ ಸಭೆಯಿಂದ ದೂರವೇ ಉಳಿದರು.ಸಭೆಗೆ ಬಿ.ಆರ್.ರಾಮಚಂದ್ರು ಬರದಿರುವುದು ಹಲವು ಜೆಡಿಎಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು.ಈ ಹಿನ್ನಲೆಯಲ್ಲಿ ಮಂಡ್ಯ ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಖಾತ್ರಿಯಾಯಿತು.
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಡಿ. 22ರಂದು ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಶಾಸಕ ಎಂ. ಶ್ರೀನಿವಾಸ್ ಕರೆದಿದ್ದ ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಬಿ.ಫಾರಂ ಆಕಾಂಕ್ಷಿತರಾಗಿರುವ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್. ಎನ್ ಯೋಗೇಶ್, ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ವೇದಿಕೆಯ ಮೇಲಿದ್ದರು.ಆದರೆ ಮತ್ತೋರ್ವ ಪ್ರಬಲ ಆಕಾಂಕ್ಷಿ ಬಿ.ಆರ್.ರಾಮಚಂದ್ರು ವೇದಿಕೆಯ ಮೇಲೆ ಕಾಣದಿದ್ದು ಎಲ್ಲರ ಗಮನಕ್ಕೂ ಬಂದಿತು.
ರಾಮಚಂದ್ರು ಅವರು ಮಂಡ್ಯ ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.ಅವರೂ ಕೂಡ ಮಂಡ್ಯ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.ಎಲ್ಲಾ ಜೆಡಿಎಸ್ ಆಕಾಂಕ್ಷಿಗಳಿಗೆ ಆಹ್ವಾನ ನೀಡಿ, ರಾಮಚಂದ್ರು ಅವರಿಗೆ ಆಹ್ವಾನ ನೀಡದಿರುವುದು ಸರಿಯಲ್ಲ ಎಂದು ಬಿ.ಆರ್. ರಾಮಚಂದ್ರು ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ : ಪಂಚರತ್ನ ರಥಯಾತ್ರೆಗೆ ಅದ್ದೂರಿ ಸ್ವಾಗತ : ಶಾಸಕ ಎಂ.ಶ್ರೀನಿವಾಸ್
ಜಿಲ್ಲಾಧ್ಯಕ್ಷ ಡಿ. ರಮೇಶ್ ಅವರು ಕೂಡ ಸಭೆಗೆ ಬರುವಂತೆ ಆಹ್ವಾನ ನೀಡಿಲ್ಲ. ಈ ರೀತಿ ಮಾಡಿದರೆ ಜೆಡಿಎಸ್ ಪಕ್ಷ ಸಂಘಟನೆ ಮಾಡುವುದು ಹೇಗೆ? ನಾಲ್ವರು ಆಕಾಂಕ್ಷಿತರ ಪೈಕಿ ಬಿ.ಫಾರಂ ಯಾರಿಗಾದರೂ ಸಿಗಲಿ, ಬಿ.ಆರ್.ರಾಮಚಂದ್ರು ಅವರಿಗೂ ಆಹ್ವಾನ ನೀಡಬೇಕಿತ್ತು ಎಂಬುದು ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ.