ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಹಾಡಹಗಲೇ ಎರಡು ಚಿರತೆಗಳು ದಾಳಿ ಮಾಡಿ ಒಂದು ಕುರಿಯನ್ನು ಹೊತ್ತೊಯ್ದು ಎರಡು ಕುರಿಗಳನ್ನು ಸಾಯಿಸಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರಾಜೀವ್ ಬಿನ್ ಸ್ವಾಮಿಗೌಡ ಅವರ ಮೂರು ಕುರಿಗಳನ್ನು ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಬೇಟೆಯಾಡಿವೆ.
ಬೇಬಿ ಬೆಟ್ಟದ ಅರಣ್ಯ ಪ್ರದೇಶದ ಪಕ್ಕ ಜಾತ್ರೆ ಮಾಳದಲ್ಲಿ ಕುರಿ ಮೇಯಿಸುತ್ತಿದ್ದಾಗ ಎರಡು ಚಿರತೆಗಳು ಏಕಾಏಕಿ ದಾಳಿ ಮಾಡಿ, ಮೂರು ಕುರಿಗಳನ್ನು ಸಾಯಿಸಿದ್ದು ಅಕ್ಕ ಪಕ್ಕದಲ್ಲಿದ್ದ ರೈತರು ಕೂಗಾಡಿ ಕಿರುಚಾಡಿದಾಗ ಎರಡು ಕುರಿಗಳನ್ನು ಬಿಟ್ಟು ಒಂದು ತೆನೆ ಕುರಿಯನ್ನು ಎಳೆದೊಯ್ದಿವೆ.
ಇದರಿಂದ ಕುರಿ ಮಾಲೀಕ ರಾಜೀವ ಅವರಿಗೆ ಸುಮಾರು ನಲವತ್ತು ಸಾವಿರ ರೂಪಾಯಿಗಳ ನಷ್ಟ ಆಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಈ ಪ್ರದೇಶದಲ್ಲಿ ಅತಿ ಹೆಚ್ಚು ಚಿರತೆ ದಾಳಿ ಮಾಡುತ್ತಿದ್ದು ಇದರಿಂದ ನಮ್ಮ ರೈತರಿಗೆ ಮುಕ್ತಿ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.