ಅತಿ ವೇಗವಾಗಿ ಬಂದ ಕಾರೊಂದು ತಿರುವಿನಲ್ಲಿ ನಿಯಂತ್ರಣ ತಪ್ಪಿ ನಾಲೆಗೆ ಉರುಳಿಬಿದ್ದ ಪರಿಣಾಮ ಐವರು ಜಲಸಮಾಧಿಯಾದ ಘಟನೆ ಘಟನೆ ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ನಡೆದಿದೆ.
ಇಂದು ಸಂಜೆ 4.30 ಸುಮಾರಿಗೆ ಬನಘಟ್ಟ ಬಳಿ ವಿಶ್ವೇಶ್ವರಯ್ಯ ನಾಲೆಗೆ ಮೈಸೂರಿನಿಂದ ನಾಗಮಂಗಲ ಕಡೆಗೆ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ.ಕಾರಿನಲ್ಲಿದ್ದ ಐವರು ಹೊರಬರಲಾಗದೆ ಜಲ ಸಮಾಧಿಯಾಗಿದ್ದಾರೆ,ತುಮಕೂರು ಜಿಲ್ಲೆಯ ತಿಪಟೂರು ಮೂಲದ ಕೆ ಟಿ ಕೃಷ್ಣಪ್ಪ, ಧನಂಜಯ,,ಹುಚ್ಚಪ್ಪ ಹಾಗೂ ಇನ್ನಿಬ್ಬರು ಜೀವಂತ ಜಲ ಸಮಾಧಿಯಾಗಿದ್ದು,ನಾಲೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಇದ್ದುದ್ದರಿಂದ ಕಾರಿನಲ್ಲಿದ್ದ ಎಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಚಂದ್ರಪ್ಪ ಎಂಬುವರಿಗೆ ಸೇರಿದ (ಕೆಎ -14, ಎ 2457) ಬಿಳಿ ಬಣ್ಣದ ಕಾರು ಅತಿ ವೇಗವಾಗಿ ಬಂದು ವಿಸಿ ನಾಲೆಗೆ ಮುಳುಗಿದೆ.ಕೆ ಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನಿನ್ನೆಯಿಂದ ನೀರು ಬಿಡುಗಡೆ ಮಾಡಿದ್ದರಿಂದ ನಾಲೆ ಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿತ್ತು, ನಾಲೆಗೆ ಕಾರು ಬಿದ್ದು ನೀರಿನೊಳಗೆ ಮುಳುಗುತ್ತಿದ್ದ ದೃಶ್ಯವನ್ನು ಸ್ಥಳೀಯರು ವೀಕ್ಷಿಸಿ ಜೋರಾಗಿ ಕೂಗಿಕೊಂಡಿದ್ದಾರೆ.
ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರನ್ನು ಕರೆಸಿಕೊಂಡು ನಾಲೆಯೊಳಗೆ ಸುಮಾರು ಎರಡು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಕಾರನ್ನುಸುಮಾರು ರಾತ್ರಿ 8.15 ಸಮಯದಲ್ಲಿ ಕ್ರೇನ್ ಮೂಲಕ ಮೇಲೆತ್ತಿದರು.
ನಾಲೆಯ ತಿರುವಿನಲ್ಲಿ ಎದುರುಗಡೆಯಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆಯಲು ತಪ್ಪಿಸುವ ಪ್ರಯತ್ನ ಮಾಡಿದ್ದರಿಂದ ಕಾರು ನಾಲೆಯೊಳಗೆ ಉರುಳಿ ಬಿತ್ತು ಎಂದು ಹೇಳಲಾಗಿದೆ.
ಡಿಸಿ-ಎಸ್ಪಿ ಭೇಟಿ
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಸಂತೋಷ್, ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಪಾಂಡವಪುರ ವಿವೇಕಾನಂದ, ಶ್ರೀರಂಗಪಟ್ಟಣ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು.