ಪಿ.ಎನ್.ಜವರಪ್ಪಗೌಡರು ನಮ್ಮನ್ನು ಕುವೆಂಪು ಅವರ ಮನೆಯಿಂದ ಬಂದಿದ್ದಾರೆ ಎಂದು ಅತ್ಯಂತ ಆತ್ಮೀಯತೆ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರ ನೆನಪು ನಮ್ಮಲ್ಲಿ ಸದಾ ಹಸಿರಾಗಿರುತ್ತದೆ ಎಂದು ಸ್ಮರಿಸಿದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಅವರು, ಜವರಪ್ಪಗೌಡರು ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಗಣ್ಯ ಎಂದು ತಿಳಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆವಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ‘ಪಾರ್ವತಮ್ಮ ಪಿ.ಎನ್ ಜವರಪ್ಪ ಗೌಡ ಪತ್ರಿಕಾ ಪ್ರಶಸ್ತಿ’ಗಳ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಾಜಕೀಯ ಕ್ಷೇತ್ರದಲ್ಲಿ ಎರಡು ರೀತಿಯ ವ್ಯಕ್ತಿಗಳಿರುತ್ತಾರೆ. ಒಬ್ಬರು ‘ರಾಜಕಾರಣಿ’, ಇನ್ನೊಬ್ಬರು ‘ರಾಷ್ಟ್ರಕಾರಣಿ'(ಸ್ಟೇಟ್ಸ್ ಮನ್) ರಾಜಕಾರಣಿ ಯಾವಾಗಲೂ ಮುಂದಿನ ಚುನಾವಣೆಯ ಬಗ್ಗೆ ಚಿಂತಿಸುತ್ತಾನೆ, ಆದರೆ ರಾಷ್ಟ್ರಕಾರಣಿ ಮುಂದಿನ ಜನಾಂಗದ ಬಗ್ಗೆ ಚಿಂತಿಸುತ್ತಾನೆ. ಜವರಪ್ಪ ಗೌಡರು ತಮ್ಮ ಸಂಪರ್ಕಕ್ಕೆ ಬಂದ ರಾಜಕಾರಣಿಯನ್ನು ರಾಷ್ಟ್ರಕಾರಣಿಯಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ರಾಷ್ಟ್ರ ಕಾರಣಿಯಿಂದ ಜನಹಿತ ಕಾರ್ಯಗಳು ನಡೆದು ರಾಷ್ಟ್ರಕ್ಕೆ ಒಳಿತಾಗುತ್ತದೆ. ಅಂತಹ ಮಹತ್ವದ ಕೆಲಸವನ್ನು ಜವರಪ್ಪಗೌಡ ಮಾಡಿದ್ದಾರೆ ಎಂದು ಬಣ್ಣಿಸಿದರು.
ತಾರಿಣಿ ಕೆ. ಚಿದಾನಂದಗೌಡ ಹಾಗೂ ಡಾ.ಕೆ. ಚಿದಾನಂದಗೌಡರವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಪತ್ರಕರ್ತರಾದ ರಾಜು ಮಳವಳ್ಳಿ ಹಾಗೂ ಪ್ರಜಾವಾಣಿ ಪತ್ರಿಕೆಯ ಪತ್ರಕರ್ತರಾದ ಗಣಂಗೂರು ನಂಜೇಗೌಡರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ. ಜಯಪ್ರಕಾಶಗೌಡರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಂಗಳೂರಿನ ವಿಜಯ ಸಂಜೆ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಶಾಂತರಾಜುರವರು ಅಭಿನಂದನಾ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ದತ್ತದಾನಿಗಳಾದ ಪಿ.ಜೆ. ಚೈತನ್ಯ ಕುಮಾರ್, ಹೆಚ್.ಎಸ್. ಮುದ್ದೆಗೌಡ, ಲೋಕೇಶ್ ಚಂದಗಾಲು, ತಗ್ಗಹಳ್ಳಿ ವೆಂಕಟೇಶ್, ಮಂಜುಳಾ ಉದಯಶಂಕರ್, ಎಂ.ಕೆ.ಹರೀಶ್ ಕುಮಾರ್ ಹಾಗೂ ಹೆಚ್. ಡಿ. ಸೋಮಶೇಖರ್ ಹಾಜರಿದ್ದರು.