ಮಣಿಪುರ ಹಿಂಸಾಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕ್ಯಾಥೋಲಿಕ್ ಪಾದ್ರಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ಪಾದ್ರಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಫಾದರ್ ಅನಿಲ್ ಫ್ರಾನ್ಸಿಸ್(40) ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾದವರು. ಇವರು ಸಿರೋ ಮಲಬಾರ್ ಚರ್ಚ್ನ ಸದಸ್ಯರಾಗಿದ್ದರು. ಸಾಗರ ಜಿಲ್ಲೆಯ ಗರ್ಹಕೋಟಾದಲ್ಲಿರುವ ಸೇಂಟ್ ಅಲ್ಫೋನ್ಸಾ ಅಕಾಡೆಮಿಯಲ್ಲಿ ಮ್ಯಾನೇಜರ್ ಆಗಿದ್ದರು.
ಫಾದರ್ ಅನಿಲ್ ಫ್ರಾನ್ಸಿಸ್ ಸ್ಮಶಾನದ ಬಳಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಬುಧವಾರ, ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳಲು ಫ್ರಾನ್ಸಿಸ್ ಸಾಗರ್ನಲ್ಲಿರುವ ಬಿಷಪ್ ಹೌಸ್ಗೆ ತೆರಳಿದ್ದರು. ಆದರೆ ಆ ಬಳಿಕ ಅವರು ನಾಪತ್ತೆಯಾಗಿದ್ದರು. ಆತ್ಮಹತ್ಯಾ ಪತ್ರದಲ್ಲಿ ಫ್ರಾನ್ಸಿಸ್ ತನ್ನ ದೇಹವನ್ನು ಸಮಾಧಿ ಮಾಡುವ ಬದಲು ದಹನ ಮಾಡಲು ಬಯಸುವುದಾಗಿ ಹೇಳಿದ್ದಾರೆ.
ಫಾದರ್ ಸಾಬು ಪುಥೆನ್ಪುರಕಲ್ ಈ ಕುರಿತು ಮಾತನಾಡಿದ್ದು, ಫ್ರಾನ್ಸಿಸ್ ಅವರ ಆತ್ಮಹತ್ಯೆಗೆ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾತ್ರ ಕಾರಣವಲ್ಲ, ಬದಲಾಗಿ ಬೇರೆ ಕಾರಣ ಕೂಡ ಇರಬಹುದು ಎಂದು ಹೇಳಿದ್ದಾರೆ.
ಮಣಿಪುರ ಹಿಂಸಾಚಾರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್ಗೆ ಸಂಬಂಧಿಸಿದಂತೆ ಫಾದರ್ ಅನಿಲ್ ಫ್ರಾನ್ಸಿಸ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಕ್ಕಾಗಿ ಒತ್ತಡದಲ್ಲಿದ್ದರು ಎಂದು ಕೂಡ ಹೇಳಲಾಗಿದೆ.