ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ರಾ.ಪಂ ಸದಸ್ಯರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಉದ್ಯೋಗಖಾತ್ರಿ ಯೋಜನೆ ಜಾರಿ ಮಾಡುವಲ್ಲಿ ನಿರ್ಲಕ್ಷ್ಯದ ಜೊತೆಗೆ ಸಾರ್ವಜನಿಕ ಕೆಲಸಗಳು ನಡೆಯುತ್ತಿಲ್ಲವೆಂದು ಆರೋಪಿಸಿ ಮಳವಳ್ಳಿ ತಾಲ್ಲೂಕಿನ ಆಗಸನಪುರ ಗ್ರಾ.ಪಂ. ಕಚೇರಿ ಮುಂದೆ ಗ್ರಾ,ಪಂ ಸದಸ್ಯರು ಸೇರಿದಂತೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಿ ಉಮೇಶ್ ಮಾತನಾಡಿ, ಕೊಟ್ಟಿಗೆ, ಇಂಗುಗುಂಡಿ ಸೇರಿದಂತೆ ಇತರೆ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕೆಲಸಗಳನ್ನು ರೈತರಿಗೆ ನೀಡುತ್ತಿಲ್ಲ, ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗದೇ ಗಾಂಧಿ ಕಂಡ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ, ಇಸ್ವತ್ತು ಮಾಡಿಸಲು ಅರ್ಜಿಕೊಟ್ಟು ಹಲವು ವರ್ಷಗಳೇ ಕಳೆದರೂ ಯಾವುದೇ ಈ ಸ್ವತ್ತು ಮಾಡಿಕೊಡುತ್ತಿಲ್ಲವೆಂದು ಆರೋಪಿಸಿದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಇಷ್ಟಬಂದ ಸಮಯಕ್ಕೆ ಕಚೇರಿಗೆ ಬರುತ್ತಾರೆ, ಸದಸ್ಯರಿಗೆ ಸರಿಯಾದ ಗೌರವ ನೀಡುತ್ತಿಲ್ಲ, ಸಮಾನ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ನಡವಳಿಕೆ ಪುಸ್ತಕದಲ್ಲಿ ನಮೂದಿಸಬೇಕೆಂದು ಕೇಳಿಕೊಂಡರೂ ನಡವಳಿಕೆ ಪುಸ್ತಕದಲ್ಲಿ ಬರೆಯುತ್ತಿಲ್ಲ, ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಸಮಸ್ಯೆಗಳನ್ನು ಬಗೆಹರಿಸದಿದ್ದರೇ ಪ್ರತಿಭಟನೆಯನ್ನು
ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.
ಶಿವಮಾದೇಗೌಡ ಮಾತನಾಡಿ, 2015ರಲ್ಲಿ ಇ- ಸ್ವತ್ತು ಮಾಡಿಸಲು ಅರ್ಜಿ ಸಲ್ಲಿಸಿ ಪೂರಕ ದಾಖಲೆಗಳನ್ನು ನೀಡಲಾಗಿದೆ, ಆದರೂ ಮಾಡಿಕೊಟ್ಟಿಲ್ಲ, 2020ರಲ್ಲಿ ಅರ್ಜಿ ಹಾಕಿ ದಾಖಲೆಗಳನ್ನು ನೀಡಿದರೂ ಇಲ್ಲಿಯವರೆಗೂ ಇ- ಸ್ವತ್ತು ಮಾಡಿಕೊಟ್ಟಿಲ್ಲ, ಲಂಚ ಕೊಟ್ಟವರಿಗೆ ಮಾತ್ರ ಕೆಲಸ ಮಾಡಿಕೊಡಲಾಗುತ್ತಿದೆ, ಮೇಲ್ಮಟ್ಟದ
ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ನ್ಯಾಯ ನೀಡಬೇಕೆಂದು ಮನವಿ ಮಾಡಿದರು.
ಗ್ರಾ.ಪಂ ಸದಸ್ಯರಾದ ಕೆಂಬೂತಗೆರೆ ಅಣ್ಣಹಳ್ಳಿ ಗ್ರಾಮದ ಉಮೇಶ್,ಸಿ ಪವಿತ್ರ, ನಾಗಲೀಂಗೇಗೌಡ, ಮುಖಂಡರಾದ ರಾಜೇಶ್, ಉಮೇಶ್, ರಾಜಣ್ಣ, ನಾಗಣ್ಣ, ಮನುಕುಮಾರ್, ಪುಟ್ಟಸ್ವಾಮಿ, ಗೋಬಿ ರಮೇಶ್, ಸುರೇಶ್, ಎಚ್ಇ ನಾಗೇಗೌಡ, ಶಿವಮಾದೇಗೌಡ ಸೇರಿದಂತೆ ಇತರರು ಇದ್ದರು.