ಕೇಂದ್ರದ ಬಿಜೆಪಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನ್ನು ಮಾರ್ಚ್ 11ರಂದು ಜಾರಿಗೊಳಿಸಿದೆ. ಆದರೆ ಕೇರಳದಲ್ಲಿ ಸಿಎಎ ಅನ್ನು ನಾವು ಅನುಷ್ಠಾನ ಮಾಡಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
“ಸಿಎಎ ಕೋಮು ವಿಭಜನೆ ಮಾಡುವ ಕಾನೂನಾಗಿದೆ. ಇಂತಹ ಕಾನೂನನ್ನು ನಮ್ಮ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ” ಎಂದು ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ಇನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೂಡಾ ಸಿಎಎಗೆ ಜಾರಿಯನ್ನು ಖಂಡಿಸಿದ್ದಾರೆ.
“ಮುಸ್ಲಿಂ ಅಲ್ಪಸಂಖ್ಯಾತರನ್ನು ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಮ್ಮ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ನಮ್ಮ ಸರ್ಕಾರ ಈ ಹಿಂದೆಯೇ ಹೇಳಿದೆ. ನಾವು ಈಗಲೂ ಆ ನಿಲುವನ್ನೇ ಹೊಂದಿದ್ದೇವೆ. ಈ ಕೋಮು ವಿಭಜನೆ ಮಾಡುವ ಕಾನೂನಿನ ವಿರುದ್ಧ ಕೇರಳ ನಿಲ್ಲುತ್ತದೆ” ಎಂದು ಕೇರಳ ಸಿಎಂ ತಿಳಿಸಿದರು.
ಡಿಸೆಂಬರ್ 2019ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರವು 2024ರ ಮಾರ್ಚ್ 11ರಂದು ಜಾರಿಗೊಳಿಸಿದ್ದು, ವಿಪಕ್ಷಗಳು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಕಾಯ್ದೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಬರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ಪಡೆಯುವ ಅವಕಾಶ ನೀಡುತ್ತದೆ.
2014 ಡಿಸೆಂಬರ್ 31ರೊಳಗೆ ಭಾರತಕ್ಕೆ ಆಗಮಿಸಿದ ಹಿಂದೂ, ಸಿರ್ಖ, ಬೌದ್ಧರು, ಜೈನರು, ಪಾರ್ಸಿಗಳಿಗೆ ಭಾರತದ ಪೌರತ್ವ ಪಡೆಯಲು ಈ ಕಾಯ್ದೆ ಅವಕಾಶ ನೀಡುತ್ತದೆ. ಆದರೆ ನಮ್ಮ ಜಾತ್ಯಾತೀತ ದೇಶದಲ್ಲಿ ಮುಸ್ಲಿಮ್ ಸಮುದಾಯವನ್ನು ಮಾತ್ರ ಈ ಕಾಯ್ದೆಯಲ್ಲಿ ಹೊರಗಿಟ್ಟಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.