Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿವೇಶನ ನೀಡಲು ಆಗ್ರಹಿಸಿ ಪ್ರತಿಭಟನೆ

ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿ ವ್ಯಾಪ್ತಿಯ ಹಲ್ಲೇಗೆರೆ ಗ್ರಾಮದ ನಿವೇಶನ ರಹಿತರರಿಗೆ ಕೂಡಲೇ ನಿವೇಶನ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆ ಗೊಂಡ ಗ್ರಾಮಸ್ಥರು ಕಳೆದ ಅನೇಕ ವರ್ಷಗಳಿಂದ ಹಲ್ಲೇಗೆರೆ ಗ್ರಾಮದಲ್ಲಿ ವಾಸ ಮಾಡುತ್ತಿದ್ದರೂ ಈ ವರೆಗೆ ನಿವೇಶನ ಕಲ್ಪಿಸಿಲ್ಲ. ಮಳೆ ಬಂದ ಸಂದರ್ಭದಲ್ಲಿ ಮಕ್ಕಳೊಂದಿಗೆ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದ್ದು, ಕೂಡಲೇ ಸೂಕ್ತ ನಿವೇಶನ ಕಲ್ಪಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಹಲ್ಲೆಗೆರೆ ಗ್ರಾಮದ ಸರ್ವೆ ನಂ.1530ರಲ್ಲಿ 1.02.00,ಗುಂಟೆ ಗ್ರಾಮಠಾಣಾ ಜಾಗ 500 ಎಕರೆಯಷ್ಟಿದ್ದು, ಈ ಜಾಗವನ್ನು ಕೆಲವು ಪಟ್ಟಾಭದ್ರ ಹಿತಾಸಕ್ತಿ ಯವುಳ್ಳವರು ಆಕ್ರಮಿಸಿಕೊಂಡಿದ್ದಾರೆ. ಹಲ್ಲೇಗೆರೆ ಮೋಳೆ, ಚಿಕ್ಕಬಳ್ಳಿ, ಹಲ್ಲೇಗೆರೆ ಗ್ರಾಮದಲ್ಲಿ ವಾಸವಾಗಿರುವ ಎಲ್ಲಾ ಜಾತಿ ಬಡ ಜನರಿಗೆ ನಿವೇಶನ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಈ ಜಾಗವನ್ನು ಅಕ್ರಮಿಸಿಕೊಂಡಿರುವವರಿಂದ ಬಿಡಿಸಿ ಬಡವರಿಗೆ ಹಂಚಿಕೆ ಮಾಡಿ ಎಂದು ಮನವಿ ಮಾಡಿದರು.

ಸಂಚಾಲಕ ಎಂ.ವಿ.ಕೃಷ್ಣ ಮಾತನಾಡಿ, ಈ ಕ್ಷೇತ್ರದ ಶಾಸಕರು ಸಹ ಸರ್ಕಾರಿ ಜಾಗವನ್ನು ಆಕ್ರಮಿಸಿಕೊಂಡಿರುವವರಿಂದ ಬಿಡಿಸಿ ಬಡವರಿಗೆ ಹಂಚಿಕೆ ಮಾಡಿ ಎಂದು ತಹಶೀಲ್ದಾರ್‌ರವರಿಗೆ ಸೂಚಿಸಿದ ಮೇರೆಗೆ ಮಂಡ್ಯ ತಹಶೀಲ್ದಾರ್ ರವರು ಸದರಿ ಜಾಗವನ್ನು ಸರ್ವೆಯರ್ ಮತ್ತು ರಾಜಸ್ವ ನಿರೀಕ್ಷಕರ ಸಮ್ಮುಖದಲ್ಲಿ ಹಾಗೂ ಕೆರಗೋಡು ಪೊಲೀಸ್ ಅಧಿಕಾರಿಗಳ ಬಂದೋಬಸ್ತಿನಲ್ಲಿ ಅಳತೆ ಗುರುತಿಸಿ ಹದ್ದು ಬಸ್ತುಮಾಡಿ ಗುರುತಿನ ಕಲ್ಲುಗಳನ್ನು ಹಾಕಿಸಲಾಗಿತ್ತು.

ಸದರಿ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ಗುರುತಿನ ಕಲ್ಲುಗಳನ್ನು ಕಿತ್ತುಹಾಕಿ, ಸಾರ್ವಜನಿಕ ಆಸ್ತಿಯಲ್ಲಿ ಭತ್ತದ ಬೆಳೆಯನ್ನು ನಾಟಿ ಮಾಡಿರುತ್ತಾರೆ. ಇವರ ಮೇಲೆ ಕೆರಗೋಡು ಪೊಲೀಸ್ ಠಾಣೆಯವರು ಯಾವುದೆ ಕ್ರಮ ಕೈಗೊಳ್ಳದೆ ಇರುವುದರಿಂದ ಅಲ್ಲಿನ ನಿವೇಶನರಹಿತರಿಗೆ ಅನ್ಯಾಯವಾಗಿರುತ್ತದೆ ಎಂದು ಆರೋಪ ಮಾಡಿದರು.

ಆದ್ದರಿಂದ ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ನಿವೇಶನ ರಹಿತರಿಗೆ ನಿವೇಶನ ಕೊಡಿಸಿ ಅಕ್ರಮವಾಗಿ ಪ್ರವೇಶ ಮಾಡಿರುವ ಭೂಗಳ್ಳರ ಮೇಲೆ ಕಾನೂನು ಕ್ರಮಕೈಗೊಳ್ಳಲು ಕ.ರಾ.ದ.ಸಂ.ಸ, ಒತ್ತಾಯಿ ಸುತ್ತದೆ ಎಂದರು.

ಕೃಷ್ಣಪ್ಪ ಮಾಚಳ್ಳಿ. ದೇವರಾಜು. ಅರಸಯ್ಯ. ಪ್ರೇಮಲತಾ. ಸುದರ್ಶನ. ಪುಟ್ಟಸ್ವಾಮಿ. ಸಿದ್ದಯ್ಯ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!