ಪ್ರಸ್ತುತ ದಿನಗಳಲ್ಲಿ ಶೋಷಿತ ಸಮುದಾಯಗಳು ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಬಲೀಕರಣಗೊಳ್ಳುವುದು ಅತ್ಯವಶ್ಯ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಮಂಡ್ಯ ನಗರದ ಗಾಂಧಿಭವನದಲ್ಲಿ ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘ(ಎವಿಎಸ್ಎಸ್) ತಾಲ್ಲೂಕು ಶಾಖೆ ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಆರ್ಥಿಕ ಸಬಲೀಕರಣಕ್ಕೆ ಆರ್ಬಿಐ ಸ್ಥಾಪನೆಗೆ ಮುನ್ನುಡಿ ಬರೆದ ಆರ್ಥಿಕ ತಜ್ಞ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಒಂದು ರಾಷ್ಟ್ರೀಕೃತ ಬ್ಯಾಂಕ್ ಇಲ್ಲದಿರುವುದು ದುರಂತವಲ್ಲದೆ ಮತ್ತೇನು ಎಂದು ಎಚ್ಚರಿಸಿದರು.
ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮಾನತೆಯಿದ್ದರೆ ಮಾತ್ರ ಪ್ರಗತಿಯತ್ತ ಭಾರತ ಸಾಗಲು ಸಾಧ್ಯ,ಇಲ್ಲದಿದ್ದರೆ ಗುಲಾಮಗಿರಿ ಹೆಚ್ಚಾಗುತ್ತಲೆ ಸಾಗುತ್ತದೆ.ಶೋಷಿತ ಜನಸಮುದಾಯ ಬಡತನದಲ್ಲೇ ಸಾಗಬೇಕಿದೆ ಎಂದರು.
ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘವು ಮುಂದಿನ 5 ವರ್ಷಗಳಲ್ಲಿ 100ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸಲು ರಾಜ್ಯದಲ್ಲಿರುವ ಜನತೆ ಷೇರುದಾರರಾಗಿ, ವಾರ್ಷಿಕ 100ಕೋಟಿ ರೂ.ವ್ಯವಹಾರ ನಡೆಸಿದರೆ ಆರ್ಬಿಐ ನಿಂದ ಅನುಮತಿ ಪಡೆದು ಅಂಬೇಡ್ಕರ್ ಬ್ಯಾಂಕ್ ಸ್ಥಾಪಿಸಲು ಯೋಜನೆ ರೂಪಿಸಬಹದು ಎಂದು ಕಿವಿಮಾತೇಳಿದರು.
ಮುಂದಿನ ದಿನಗಳಲ್ಲಿ ಶೋಷಿತ ಸಮುದಾಯಗಳು ಶಿಕ್ಷಣ -ಸಂಘಟನೆ-ಹೋರಾಟ ಎನ್ನುವ ಬದಲು ಶಿಕ್ಷಣ- ಸಂಘಟನೆ-ಅಧಿಕಾರ ಎಂದು ಎಚ್ಚರಿಸುವ ಕಾರ್ಯಸಾಗಬೇಕಿದೆ.ಎಲ್ಲಾ ಸಮಸ್ಯೆಗಳಿಗೆ ರಾಜ್ಯಾಧಿಕಾರ ಮತ್ತು ಆರ್ಥಿಕ ಸಬಲೀಕರಣ ಪರಿಹಾರ ನೀಡುವಲ್ಲಿ ಯಶಸ್ಸಾಗುತ್ತದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಣ್ಯರು ಪುರಸ್ಕಾರ ನೀಡಿದರು. ಷೇರುದಾರರು, ಸ್ವ ಸಹಾಯ ಸಂಘಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಬೌದ್ಧ ಧರ್ಮಗುರು ಬೋಧಿದತ್ತ ಬಂತೇಜಿ, ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಎವಿಎಸೆಸ್ ಸಂಸ್ಥಾಪಕ ಅಧ್ಯಕ್ಷ ರಾಮಣ್ಣ, ತಾಲೂಕು ಶಾಖೆ ಮುಖ್ಯಸ್ಥ ಗುರುಶಂಕರ್, ಅಧೀಕ್ಷಕ ಅಭಿಯಂತರ ಚಂದ್ರಹಾಸ, ಡಿಎಸ್ ಎಸ್ ರಾಜ್ಯ ಸಂಚಾಲಕ ಅಂದಾನಿ, ಸಂಘದ ಸದಸ್ಯರಾದ ಆಶಾರಾಣಿ, ಕಾಯದರ್ಶಿ ಜಯಶಂಕರ್, ಸಿಇಓ ವರಲಕ್ಷ್ಮಿ, ಕುಮಾರ್, ಮುರುಗನ್ ಮತ್ತಿತರರಿದ್ದರು.