ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ನೀಡುವ ಕನ್ನಡ ನಿತ್ಯೋತ್ಸವ ಪ್ರಶಸ್ತಿಗೆ ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಸಂಸ್ಥೆಯ ಅಧ್ಯಕ್ಷ ಡೇವಿಡ್ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿಯು ಕನ್ನಡ ನಾಡು-ನುಡಿ-ಸಂಸ್ಕೃತಿಯ ಅಭಿವೃದ್ಧಿಗಾಗಿ ಕಂಕಣ ತೊಟ್ಟು ಸುಗಮ ಸಂಗೀತ ಹಾಗೂ ವಾದ್ಯ ಸಂಗೀತ ಕ್ಷೇತ್ರದಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಡಾ. ಸಿ. ಅಶ್ವಥ್ ಹಾಗೂ ರಾಷ್ಟ್ರಕವಿ ಕುವೆಂಪುರವರ ನೆನಪಿನ ”ಕನ್ನಡವೇ ಸತ್ಯ ಅಶ್ವತ್ಥ ನಿತ್ಯ ” – ”ಮನುಜಮತ ವಿಶ್ವಪಥ” ಅಭೂತಪೂರ್ವ ಕಾರ್ಯಕ್ರಮವು ವಿಶ್ವದಾಖಲೆ ಕಾರ್ಯಕ್ರಮವನ್ನು ನಡೆಸಿಕೊಟ್ಟು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ರಾಷ್ಟ್ರಕವಿ ಕುವೆಂಪು ಹಾಗೂ ಗಾನಗಾರುಡಿಗ ಡಾ.ಸಿ.ಅಶ್ವತ್ ಅವರ ಜನ್ಮದಿನದ ಪ್ರಯುಕ್ತ “ಆನಂದಮಯ ಈ ಜಗ ಹೃದಯ” ಎಂಬ ನೂತನ ಕಾರ್ಯಕ್ರಮವು ಡಿ.29ರಂದು ಸಂಜೆ 5.30ಕ್ಕೆ ಬೆಂಗಳೂರಿನ ಗವಿಪುರಂನ ಉದಯಭಾನು ಕಲಾಸಂಘದಲ್ಲಿ ಏರ್ಪಡಿಸಲಾಗಿದೆ. ಸಮಾರಂಭವನ್ನು ಸುಗಮ ಸಂಗೀತ ಪರಿಷತ್ನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಹಾಗೂ ಪತ್ರಕರ್ತ ಜೆ.ಹೆಚ್. ಅನಿಲ್ಕುಮಾರ್ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಕನ್ನಡ ನಿತ್ಯೋತ್ಸವ ಪ್ರಶಸ್ತಿಯನ್ನು ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಸಂಸ್ಥೆಯ ಅಧ್ಯಕ್ಷ ಡೇವಿಡ್ ಅವರಿಗೆ ಉದಯಭಾನು ಕಲಾಸಂಘದ ಸ್ಥಾಪಕ ಗೌರವ ಕಾರ್ಯದರ್ಶಿ ಎಂ.ನರಸಿಂಹ ಪ್ರಶಸ್ತಿ ಪ್ರದಾನ ಮಾಡುವರು.