ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀಚಂದ್ರಶೇಖರನಾಥ ಸ್ವಾಮಿಜಿಯವರ ಕುರಿತು ಲಘುವಾಗಿ ಪ್ರತಿಕ್ರಿಯಿಸಿರುವ ಸಚಿವ ಕೆ ಎನ್ ರಾಜಣ್ಣ ಅವರ ವರ್ತನೆ ಖಂಡಿಸಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮದ್ದೂರು ಘಟಕ ವತಿಯಿಂದ ಜೂ.29ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಕಂಠೀರವ ಒಳ ಕ್ರೀಡಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀಚಂದ್ರಶೇಖರನಾಥ ಸ್ವಾಮೀಜಿ ಅವರು ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಪ್ರಸ್ಥಾಪಿಸಿದ್ದು ಸಹಜ ಪ್ರಕ್ರಿಯೆ ಮತ್ತು ಸೂಕ್ತ ವೇದಿಕೆಯಲ್ಲಿ ಸಂಬಂಧಿಸಿದವರ ಸಮಕ್ಷಮ ನೀಡಿದ ಹೇಳಿಕೆಯಾಗಿದೆ ಎಂದು ಸಂಘದ ಶಿವಲಿಂಗೇಗೌಡ ಚಂದೂಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಅನಗತ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾಮೀಜಿಯವರು ಪೀಠಕ್ಕೆ ರಾಜೀನಾಮೆ ನೀಡಿ ಬರಲಿ, ನಾನೇ ಕಾವಿಧರಿಸಿ ಸನ್ಯಾಸಿ ಆಗುವುದಾಗಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವುದು ಸಮುದಾಯಕ್ಕೆ ನೋವುಂಟು ಮಾಡಿದೆ, ಆದ್ದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.