ನರೇಗಾ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಬಾಕಿ ಕೂಲಿ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಮಂಡ್ಯ ತಾಲ್ಲೂಕು ಪಂಚಾಯಿತಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆಯಿಂದ ಮೆರವಣಿಗೆ ಹೊರಟು ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಮಂಡ್ಯ ತಾಲ್ಲೂಕಿನ ಇಂಡವಾಳು, ಬೇವಿನಹಳ್ಳಿ, ಶಿವಳ್ಳಿ ಹಳೇಬೂದನೂರು, ಮಂಗಲ, ಹೊಳಲು, ಚೀರನಹಳ್ಳಿ, ಬಸರಾಳು, ಸೂನಗಹಳ್ಳಿ ಗ್ರಾ.ಪಂ.ಗಳಲ್ಲಿ ಕೆಲಸ ಮಾಡಿರುವ ಕೂಲಿಕಾರರಿಗೆ 100 ದಿನ ಕೆಲಸ ನೀಡಬೇಕು. ಈಗಾಗಲೇ ಕಳೆದ ಮೂರು ವರ್ಷಗಳಿಂದ ಕೆಲಸ ನಿರ್ವಹಿಸಿರುವ ಕಾಯಕ ಬಂಧುಗಳಿಗೆ ಪ್ರೋತ್ಸಾಹಧನವನ್ನು ಅವರ ಖಾತೆಗೆ ಜಮೆ ಮಾಡಬೇಕು. ಕೂಲಿಕಾರರು ಕೆಲಸ ಮಾಡುವ ಸ್ಥಳಗಳಲ್ಲಿ ಅನಾಹುತ ಸಂಭವಿಸದಂತೆ ಕೈ ಗವಸು, ಕಾಲಿಗೆ ಶೂ ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು
ಹೆಚ್ ಮಲ್ಲಿಗೆರೆ ಗ್ರಾ.ಪಂನ ಸಂಪಳ್ಳಿ ವ್ಯಾಪ್ತಿ ಸರ್ವೆ ನಂ.129 ರಲ್ಲಿ ವಾಸವಿರುವ 40 ಕುಟುಂಬಕ್ಕೆ ಹಕ್ಕು ಪತ್ರ ನೀಡಬೇಕು. ಅದೇ ಸ.ನಂ ನಲ್ಲಿ 2 ಎಕರೆ 20 ಗುಂಟೆ ನೀವೇಶನಕ್ಕೆ ಮಂಜೂರು ಮಾಡಿ ಹಕ್ಕು ಪತ್ರ ನೀಡಿದ್ದರೂ ನಿವೇಶನ ನೀಡಿಲ್ಲ, ಅವರಿಗೆ ತಕ್ಷಣ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಬೇಕು, ಹೆಚ್ ಕೋಡಿಹಳ್ಳಿ ಸರ್ವೆ ನಂ.227, 229 ಸಂತೆಕಸಲಗೆರೆ ಸರ್ವೆ ನಂ. 569 ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ಕಬ್ಬನಹಳ್ಳಿ ಗ್ರಾಮದ ಕೂಲಿಕಾರರಿಗೆ ನಿವೇಶನ ಗುರುತಿಸಿ ಹಂಚಿಕೆ ಮಾಡಬೇಕು ಇಂಡುವಾಳು ಗ್ರಾಮ ಪಂಚಾಯಿತಿ ಸರ್ವೆ ನಂ. 89 ರಲ್ಲಿ 68 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ಮನೆ ಮಂಜೂರು ಮಾಡ ಬೇಕು. ಹಳೇ ಬೂದನೂರು ಸ. ನಂ 190, 142, 144, 84, 85 ರಲ್ಲಿ ಮಂಜೂರಾಗಿರುವ ಭೂಮಿಯಲ್ಲಿ ಒತ್ತುವರಿದಾರರ ವ್ಯಾಜ್ಯ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಉಪಾಧ್ಯಕ್ಷ ಬಿ.ಎಂ. ಶಿವಮಲ್ಲಯ್ಯ, ಅಮಾಸಯ್ಯ, ಆರ್. ರಾಜು, ಸಂತೋಷ್ ಟಿ.ಪಿ. ಅರುಣ್ ಕುಮಾರ್, ಎಂ.ಎಸ್, ಅಬ್ದುಲ್ಲಾ, ಎಚ್.ಎಸ್.ಮಂಜುಳ ನೇತೃತ್ವ ವಹಿಸಿದ್ದರು.