ಕರ್ನಾಟಕ ರಾಜ್ಯದ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರ ನೇಮಕಾತಿಗೆ ತರಬೇಕು ಹಾಗೂ ಬಾಕಿ ಇರುವ ಪೌರ ಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ಹೊರಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರಸಭೆ ಆವರಣದಿಂದ ಮೆರವಣಿಗೆ ನಡೆಸಿದ ಗುತ್ತಿಗೆ ಪೌರ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲ ಕಾಲ ಧರಣಿ ನಡೆಸಿ ಮನವಿ ಸಲ್ಲಿಸಿದರು. ರಾಜ್ಯದ ನಗರಸಭೆ,ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು,ಲೋಡರ್ಸ್, ಕ್ಲೀನರ್ಸ್, ಒಳ ಚರಂಡಿ ಕಾರ್ಮಿಕರೂ ಸೇರಿದಂತೆ 15 ಸಾವಿರಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದಾರೆ.
2017ರಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸಿದಾಗ ಇವರನ್ನು ಹೊರಗುತ್ತಿಗೆಯಲ್ಲಿ ಉಳಿಸಲಾಯಿತು. ಕಾಂಗ್ರೆಸ್ ಪಕ್ಷ ಹೊರ ಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದಾಗಿ ಚುನಾವಣೆಗೂ ಮುನ್ನ ಆಶ್ವಾಸನೆ ನೀಡಿತ್ತು.ಅದರಂತ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿ ಕಡತ ಹಣಕಾಸು ಇಲಾಖೆಯಲ್ಲಿದ್ದು ಕಡತವನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆ ಪದ್ಧತಿ ಕೈ ಬಿಟ್ಟು ಎಲ್ಲಾ ನೌಕರರನ್ನು ನೇರಪಾವತಿಗೆ ತರಬೇಕು, ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು, ಅದೇ ರೀತಿ ನೀರು ಸರಬರಾಜು ಸಹಾಯಕರು, ಬೀದಿ ದೀಪ ನಿರ್ವಾಹಕರು ಹಾಗೂ ಸ್ಮಶಾನ ಕಾವಲುಗಾರರನ್ನು ನೇರ ಪಾವತಿಗೆ ಒಳಪಡಿಸಿ ಇವರ ಸೇವೆಯನ್ನು ಕಾಯಂಗ
ಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ನಾಗಣ್ಣಗೌಡ, ಜಿಲ್ಲಾಧ್ಯಕ್ಷ ಎನ್. ನಾಗರಾಜ್,ಉಪಾಧ್ಯಕ್ಷ ಪಳಿನಿ, ಮಂಜುನಾಥ್, ಲಕ್ಷ್ಮಿ,ಪಾರ್ವತಿ,ಶಿವು, ಡಿ. ನಾಗರಾಜ್,ಶಿವಕುಮಾರ್,ತಂಗ,ಎಂ. ಮಹದೇವ್,ನಾಗರಾಜ್, ಲೋಕೇಶ್ ನೇತೃತ್ವ ವಹಿಸಿದ್ದರು.