ನರೇಂದ್ರಮೋದಿಯವರ ಜನಪರ ಕಾರ್ಯಕ್ರಮ ಮೆಚ್ಚಿ ಬಿಜೆಪಿ ಪಕ್ಷ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಪಕ್ಷ ಜವಾಬ್ದಾರಿಯುತವಾಗಿ ನಡೆಸಿಕೊಂಡಿಲ್ಲದ ಕಾರಣ ಅವರು ಶೀಘ್ರ ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆಂದು ಕೆಪಿಸಿಸಿ ಸದಸ್ಯ ಗುರುಚರಣ್ ತಿಳಿಸಿದರು.
ಪಟ್ಟಣದ ಸೋಮನಹಳ್ಳಿ ಎಸ್.ಎಂ. ಶಂಕರ್ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಪ್ರಖ್ಯಾತಿ ಪಡೆದಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಸಂಪೂರ್ಣವಾಗಿ ಬಿಜೆಪಿ ಪಕ್ಷ ಕಡೆಗಣಿಸಿದೆ. ಈ ವಿಚಾರವಾಗಿ ಅವರಿಗೆ ಬೇಸರವಿದೆ. ಬಿಜೆಪಿ ಪಕ್ಷದವರು ಕೃಷ್ಣರನ್ನು ಗೌರವಯುತವಾಗಿ ನಡೆಸಿಕೊಳ್ಳದೆ ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ತಿಳಿದಿರುವ ವಿಚಾರವಾಗಿದೆ.
ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ಮಾಡುವ ಸಂದರ್ಭದಲ್ಲಿ ಕೃಷ್ಣ ಅವರ ಭಾವಚಿತ್ರವನ್ನು ಪತ್ರಿಕಾ ಜಾಹೀರಾತುಗಳಲ್ಲಿ ಮತ್ತು ಬಿಜೆಪಿ ಸರ್ಕಾರದ ಯಾವುದೇ ಸಭೆ, ಸಮಾವೇಶಗಳಲ್ಲಿ ಅವರ ಭಾವಚಿತ್ರ ಹಾಕದೆ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಹೀಗಾಗಿ ಕೃಷ್ಣರವರು ಬೇಸತ್ತು ಇಷ್ಟರಲ್ಲೇ ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆ ಎಂದರು.
ಈಗಾಗಲೇ ಅವರಿಗೆ 90 ವರ್ಷ ವಯಸ್ಸಾಗಿದೆ. ಇದನ್ನೇ ಕಾರಣವನ್ನಿಟ್ಟುಕೊಂಡು ರಾಜಕೀಯ ನಿವೃತ್ತಿಗೆ ಮುಂದಾಗುತ್ತಿದ್ದಾರೆ ಎಂದು ಗುರುಚರಣ್ ಹೇಳಿದರು.
ನೆಪಮಾತ್ರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೃಷ್ಣ ರವರನ್ನು ಭೇಟಿ ನೀಡಿ ಶುಭಾಶಯ ಹೇಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದರು.