ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಗುಂಡಿ ಬಿದ್ದ ರಸ್ತೆಗಳಿಂದ ಯಾವುದೇ ವಾಹನಗಳು ಸಂಚರಿಸದೇ ರೈತರು, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಸಮಸ್ಯೆ ಆಗಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಉಪ ಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಅವರಿಗೆ ಗ್ರಾಮಸ್ಥರು ಮತ್ತು ಮುಖಂಡರು ಮನವಿ ನೀಡಿದರು.
ಜಿಲ್ಲಾ ಪಂಚಾಯಿತಿಗೆ ಆಗಮಿಸಿದ ತೂಬಿನಕೆರೆ ಸರ್ಎಂ.ವಿ.ಸ್ನಾತಕೋತ್ತರ ಕೇಂದ್ರ, ಮಂಡ್ಯ ವಿವಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಆಮ್ ಆದ್ಮಿ ಪಕ್ಷ, ಕನ್ನಡ ಸೇನೆ ಮುಖಂಡರು ಸೇರಿದಂತೆ ಗ್ರಾಮಸ್ಥರು ಮನವಿ ನೀಡುವ ಮೂಲಕ ರಸ್ತೆ ದುರಸ್ತಿ ಮಾಡಿಸಿಕೊಡಲು ಆಗ್ರಹಿಸಿದರು.
ರಾಗಿಮುದ್ದನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಜಕ್ಕನಹಳ್ಳಿ ಮತ್ತು ತೂಬಿನಕೆರೆ ಸಂಪರ್ಕದ ಗುಂಡಿಬಿದ್ದ ರಸ್ತೆಯಿಂದ ರೈತರಿಗೆ ವಿದ್ಯಾರ್ಥಿಗಳಿಗೆ ಅಂಗವಿಕಲರಿಗೆ ಆಗುತ್ತಿರುವ ಅನಾನುಕೂಲ ಸರಿಪಡಿಸಬೇಕು. ಈ ರಸ್ತೆಯು ಗುಂಡಿಬಿದ್ದು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ಅಂಚಿನವರೆಗೂ ಇದರಲ್ಲಿ 1 ಕಿ.ಮೀ.ನಷ್ಟು ಮಾತ್ರ ಡಾಂಬರೀಕರಣಕ್ಕೆಂದು ಕಳೆದ ಆರುತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿಸಿರುವುದು ಸರಿಯಷ್ಟೇ, ಈ ಕಾಮಗಾರಿಯ ರಸ್ತೆಯು ಕೇವಲ ಮಣ್ಣು ಕಲ್ಲುಗಳಿಂದ ಮುಚ್ಚಿ ಒಂದು ಮಟ್ಟಕ್ಕೆ ತರಲಾಗಿದೆ. ಅದು ಸಹ ಮಳೆಗೆ ಅಲ್ಲಲ್ಲಿ ಗುಂಡಿ ಬಿದ್ದು ಅಕ್ಕಪಕ್ಕದ ಮನೆಯ ಚರಂಡಿ ನೀರು ರಸ್ತೆಗೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಟಿ.ವರಪ್ರಸಾದ್, ಕನ್ನಡ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಎಎಪಿ ಪಕ್ಷದ ಬೂದನೂರು ಬೊಮ್ಮಯ್ಯ, ಗ್ರಾಮಸ್ಥರಾದ ಸಿದ್ದರಾಜು, ಮೋಹನ್ಕುಮಾರ್, ವಿದ್ಯಾರ್ಥಿಗಳಾದ ಕಿರಣ್, ಬಿ.ಎನ್.ಸುನೀಲ್, ಬಿ.ಎಸ್.ರಕ್ಷಿತಾ, ಎಂ.ಮಹದೇವಸ್ವಾಮಿ, ಜಿ.ಆರ್.ಮಂಜುನಾಥ್, ಚಂದನ್, ಬಿ.ಟಿ.ನಿಖಿಲ್, ಎಂ.ಸುಮನ್, ಮಮತಾ ಭಾಗವಹಿಸಿದ್ದರು.