ಸಾಹಿತ್ಯಲೋಕದ ಜ್ಞಾನಪೀಠ ಪ್ರಶಸ್ತಿ ಪಡೆದ ಪುರಸ್ಕೃತ ರಾಷ್ಟ್ರಕವಿ ರಚಿಸಿರುವ ರಾಮಾಯಣ ದರ್ಶನಂ ಜನಸಾಮಾನ್ಯರ ಬದುಕಿಗೆ ಸಂಸ್ಕೃತಿ ಪ್ರಿಯತೆಯನ್ನು ತಂದು ಕೊಡುವ ಹಾಗೂ ಕಾವ್ಯಗಳ ಮೇಲೆ ಮೇಲಿನ ನಿರಂತರ ಅಭಿಮಾನ ಉಕ್ಕಿಸುವ ಕಾರ್ಯವನ್ನು ಮಾಡುವಲ್ಲಿ ಪ್ರೇರಣೆಯಾಗಿದೆ ಎಂದು ಯುವ ಸಾಹಿತಿ ಕವಿ ಕೊತ್ತತ್ತಿ ರಾಜು ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ಸಂಘದ ಕೆ.ವಿ. ಶಂಕರೇಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ‘ರಾಮಾಯಣ ದರ್ಶನಂ’ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕಾವ್ಯ ಪ್ರಪಂಚದಲ್ಲಿ ದಿವ್ಯ ಸಂಚಲನೆಯನ್ನು ಉಂಟು ಮಾಡಿದ ಕುವೆಂಪುರವರ ರಾಮಾಯಣ ದರ್ಶನಂ ಅತ್ಯಂತ ಪ್ರಭಾವದ ಮಹಾಕಾವ್ಯಗಳಲ್ಲಿ ಒಂದಾಗಿದೆ ಎಂದರು.
ವಾಲ್ಮೀಕಿ ರಾಮಾಯಣದ ಮೂಲ ಆಧಾರಿತ ಕಾವ್ಯವನ್ನು ಗಮನದಲ್ಲಿಟ್ಟುಕೊಂಡು ರಚಿಸಿದ್ದರೂ ಈ ಮಹಾಕಾವ್ಯದಲ್ಲಿ ವೈಚಾರಿಕತೆ ಸ್ತ್ರೀ ಸಮಾನತೆ, ಮೂಢ ನಂಬಿಕೆಗಳ ವಿರುದ್ದ ಭ್ರಾತೃಪ್ರೇಮ ಇತ್ಯಾದಿಗಳ ವಿರುದ್ಧ ಪ್ರೇರೇಪಿಸುವ ಉದಾತ್ತ ಅಂಶಗಳನ್ನು ರಾಷ್ಟ್ರಕವಿ ಕುವೆಂಪುರವರು ಅತ್ಯಂತ ಪ್ರಭಾವಯುತವಾಗಿ ತಮ್ಮ ಕಾವ್ಯದಲ್ಲಿ ಬಿಂಬಿಸಿದ್ದು ರಾಮಾಯಣ ದರ್ಶನವನ್ನು ರಚಿಸಿದ್ದಾರೆ ಎಂದು ವಿವರಿಸಿದರು.
ರಾಮಾಯಣದ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ನ ಆದರ್ಶ ನಡೆ, ನುಡಿಗಳು ಇಂದಿನ ಸಮಾಜಕ್ಕೆ ಪ್ರೇರಣೆಯನ್ನು ನೀಡಿದ್ದು ರಾಜಧರ್ಮ, ಪ್ರಜಾಪ್ರಭುತ್ವ ಜನಗಳಿಗೆ ಆಸರೆಯಾಗಿ ಮಾರ್ಗದರ್ಶನ, ಪಿತೃವಾಕ್ಯ ಪರಿಪಾಲನೆ , ಹಿರಿಯರಲ್ಲಿಟ್ಟ ನಂಬಿಕೆ ಮತ್ತು ಗೌರವಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ರಾಮಾಯಣ ದರ್ಶನಂ ಬಿಂಬಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಸ್ಥಾಪಕ ಸದಸ್ಯರಾದ ಕಾಶಿ ವಿಶ್ವನಾಥ ಶಾಸ್ತ್ರಿಯವರ ನೆನಪಿನಾರ್ಥ ಈ ಕಾರ್ಯಕ್ರಮ ಆಯೋಜಿಸಿದ್ದು, ಅವರ ಪುತ್ರಿ ಉಷಾ ಹಾಗೂ ಗಮಕಿ ಕಲಾಶ್ರೀ ಶ್ರೀಮತಿ ಉಪಸ್ಥಿತರಿದ್ದರು.
ಗಮಕ ಸಪ್ತಾಹ ದ ಪ್ರಥಮ ದಿನದಂದು ರಾಮಾಯಣ ದರ್ಶನಂ ಮಹಾ ಕಾವ್ಯದ ಭಾರತಮಾತೆ ಎಂಬ ಪ್ರಸಂಗವನ್ನು ನಾಡಿನ ಖ್ಯಾತ ಸಂಗೀತ ವಿದುಷಿ ಗಮಕಿ ಮೈಸೂರಿನ ಧರಿತ್ರಿ ಆನಂದ ರಾವ್ ವಾಚಿಸಿದರು.
ಪ್ರಮುಖವಾಗಿ ವ್ಯಾಖ್ಯಾನದಲ್ಲಿ ನಿರೂಪಕಿ ಶ್ವೇತ ಪ್ರಪ್ರಥಮ ಬಾರಿಗೆ ವ್ಯಾಖ್ಯಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಗಮಕಿ ಕಲಾಶ್ರೀ ವಿದ್ಯಾಶಂಕರ್ ಪ್ರಾರ್ಥಿಸಿ, ಕರ್ನಾಟಕ ಸಂಘದ ಡಾ.ಕೆಂಪಮ್ಮ ಕಾರ್ಕಳ್ಳಿ ಕಾರ್ಯಕ್ರಮ ನಿರೂಪಿಸಿದರು