ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಕಂಟ್ರಾಕ್ಟರ್ ಪರ ನಿಲ್ಲದೆ ಕೂಡಲೇ ಕಾಮಗಾರಿ ನಿಲ್ಲಿಸಿ, ಬೆಳೆಗಳ ರಕ್ಷಣೆಗಾಗಿ ಒಂದು ಕಟ್ಟು ನೀರು ಹರಿಸಬೇಕೆಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಯವರು ಕಳೆದೊಂದು ವರ್ಷದಲ್ಲಿ ಬಹಳಷ್ಟು ತಪ್ಪುಗಳನ್ನು ಮಾಡಿದ್ದಾರೆ. ಆ ಕಾರಣಕ್ಕೆ ಇಂದು ಮಂಡ್ಯ ಜಿಲ್ಲೆಯ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ತಿರಸ್ಕರಿಸಿದ್ದಾರೆ. ಕೆಆರ್ಎಸ್ ಜಲಾಶಯದಲ್ಲಿ 86 ಅಡಿ ನೀರು ಸಂಗ್ರಹವಾಗಿದ್ದು, ಕಂಟ್ರಾಕ್ಟರ್ ಗೆ ಅನುಕೂಲ ಮಾಡಿಕೊಡುವ ಬದಲು, ಈಗಲಾದರೂ ಬೆಳೆಗಳ ರಕ್ಷಣೆಗಾಗಿ ಒಂದು ಕಟ್ಟು ನೀರನ್ನು ನಾಲೆಗಳಿಗೆ ಹರಿಸಬೇಕೆಂದು ಒತ್ತಾಯಿಸಿದರು.
ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರು,ಈಗಾಗಲೇ ಜಿಲ್ಲೆಯ ಮುಖಂಡರೊಂದಿಗೆ ಚರ್ಚೆ ಮಂಡ್ಯದ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಯಾವ ಕ್ಷೇತ್ರದಲ್ಲಿ ಎಷ್ಟು ಸರ್ಕಾರಿ ಜಮೀನು ಇದೆಯೋ ಆ ಬಗ್ಗೆ ಮಾಹಿತಿಯನ್ನು ಪರಿಶೀಲಿಸಿ, ಹೊಸ ಕೈಗಾರಿಕೆಯನ್ನು ಮಂಡ್ಯಕ್ಕೆ ಕೊಡುವುದಾಗಿ ಭರವಸೆ ನೀಡಿದ್ದಾರೆ. ವಿಶೇಷವಾಗಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಅವರು ದೊಡ್ಡ ಮಟ್ಟದಲ್ಲಿ ಚಿಂತನೆ ಮಾಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಸುರೇಶ್ ಗೌಡ, ಅನ್ನದಾನಿ, ಮುಖಂಡರಾದ ಬಿ.ಆರ್. ರಾಮಚಂದ್ರು, ಅಬ್ಬಾಸ್ ಅಲಿ ಬೋಹ್ರಾ, ಡಿ. ರಮೇಶ್, ಅಮರಾವತಿ ಚಂದ್ರಶೇಖರ್ ಉಪಸ್ಥಿತರಿದ್ದರು.