ಮಂಡ್ಯ ತಾಲ್ಲೂಕು ಬಸರಾಳು ಹೋಬಳಿ ರಾಯಶೆಟ್ಟಿಪುರ ಗ್ರಾಮದಲ್ಲಿ ಬಂಡಿದಾರಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ದಲಿತ ಸಂಘ ಸಮಿತಿ ಮುಖಂಡರು, ಸರ್ಕಾರಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರಸ್ತುತ ಉಂಟಾಗಿರುವ ಬಂಡಿದಾರಿ ವಿವಾದವು ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ, ಗ್ರಾಮದ ಸರ್ವೆ ನಂ 133 ರಿಂದ ಸರ್ವೇ ನಂ 26 ರ ವರೆಗೆ ನಕಾಶೆಯಲ್ಲಿ ಬಂಡಿದಾರಿ ಇದೆ. ಈ ರಸ್ತೆಯನ್ನು ಸಾರ್ವಜನಿಕರ ಅರ್ಜಿ ಮೇಲೆ ತೆರವುಗೊಳಿಸಲು ತಹಶೀಲ್ದಾರ್ ರವರ ಆದೇಶದಂತೆ ಅಧಿಕಾರಿಗಳು ಮುಂದಾದಾಗ ಪ್ರಭಾವ ಬಳಸಿ ರಸ್ತೆ ತೆರವು ಕಾರ್ಯವನ್ನು ತಡೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರಿ ದಾಖಲೆಯಲ ನಕಾಶೆಯಲ್ಲಿರುವ ಬಂಡಿದಾರಿಯನ್ನು ಬಿಟ್ಟು ಹಿಡುವಳಿದಾರರ ಜಮೀನಿನಲ್ಲಿ ರಸ್ತೆ ಮಾಡಿಸಿಕೊಡಿ ಎಂದು ಅಧಿಕಾರಿಗಳು ಹಾಗೂ ಜನರಿಗೆ ತಪ್ಪು ಮಾಹಿತಿ ನೀಡಿ. ಕ್ಷೇತ್ರದ ಶಾಸರಕ ಹೆಸರಿಗೆ ಮಸಿ ಬಳಿಯುವ ಕೆಲಸಕ್ಕೆ ಕೆಲವರು ಮುಂದಾಗಿದ್ದಾರೆ, ಇದು ಖಂಡನೀಯ ಎಂದರು.
ಗ್ರಾಮದಲ್ಲಿ ಇಲ್ಲಸಲ್ಲದ ಸುಳ್ಳು ಸುದ್ದಿ ಹಬ್ಬಿಸಿ ಗಲಭೆಗೆ ಪ್ರಚೋದನೆ ನೀಡುತ್ತಿರುವ ಡಿ.ಎಸ್.ಎಸ್ ಮುಖಂಡ ಹಾಗೂ ಇತರರ ಕಿಡಿಗೇಡಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ. ಮಾಜಿ ಸದಸ್ಯ ಪ್ರಕಾಶ್, ಮುಖಂಡರಾದ ಶಿವಕುಮಾರ್, ಲಿಂಗೇಶ್, ಲಿಂಗೇಗೌಡ ಹಾಗೂ ಶಂಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.