ಪುಸ್ತಕ ಓದುವ ಹವ್ಯಾಸವು ಜ್ಞಾನಾರ್ಜನೆಯ ಜೊತೆ ಜೀವನ ಮೌಲ್ಯ ಅರಿಯಲು ಸಹಾಯ ಮಾಡುತ್ತದೆ ಎಂದು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ಹೇಳಿದರು.
ಮಂಡ್ಯ ತಾಲ್ಲೂಕಿನ ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಹಾಗೂ ಪರಿಚಯ ಪ್ರಕಾಶನ ಆಯೋಜಿಸಿದ “ಪುಸ್ತಕ ಓದು ಅಭಿಯಾನ” ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ “ಪುಸ್ತಕ ಓದು” ವಿಷಯದ ಕುರಿತು ಅವರು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಇಂದಿನ ದಿನಗಳಲ್ಲಿ ಹಲವು ವಿಷಯಗಳ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲಗಳಿವೆ, ಉದಾಹರಣೆಗೆ ಸ್ನಾನ ಮಾಡುವ, ಹಲ್ಲು ಸ್ವಚ್ಚಗೊಳಿಸುವ ಬಗ್ಗೆಯ ನಮಗೆ ಸರಿಯಾದ ಜ್ಞಾನವಿಲ್ಲದಂತಾಗಿದೆ, ಇದರ ಬಗ್ಗೆ ಒಬ್ಬೊಬ್ಬರು ರೀತಿ ಸರಿಯೆಂದು ವಾದಿಸುತ್ತಾರೆ. ಆದರೆ ನಿಜವಾದ ಸತ್ಯವನ್ನು ಅರಿಯಬೇಕಾದರೆ ಪುಸ್ತಕ ಓದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬ ಮನುಷ್ಯನಲ್ಲಿ ಸುಪ್ತ ಮನಸ್ಸು, ಜಾಗೃತ ಮನಸ್ಸು ಎಂಬ ಎರಡು ಮನಸ್ಸುಗಳಿರುತ್ತವೆ, ಆದರೆ ಜಾಗೃತ ಮನಸ್ಸು ಏನು ಹೇಳುತ್ತದೆಯೋ ಅದೇ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಸುಪ್ತ ಮನಸ್ಸಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಶಕ್ತಿಯಿಲ್ಲ. ಆದ್ದರಿಂದ ಯಾವಾಗಲೂ ಸಕಾರಾತ್ಮಕವಾಗಿಯೇ ಯೋಚನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರಯ್ಯ, ಶಿವಕುಮಾರ್ ಆರಾಧ್ಯ, ಎಲ್ ಸಂದೇಶ್, ಧನುಷ್ ಗೌಡ ಹಾಗೂ ಕಾಲೇಜಿನ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.