ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಹಿನ್ನೆಲೆಯಲ್ಲಿ ಭಾರತ ಹಾಗೂ ಕೆನಡಾ ನಡುವೆ ಉದ್ಭವಿಸಿರುವ ರಾಜತಾಂತ್ರಿಕ ಸಂಘರ್ಷ ಪರಿಸ್ಥಿತಿಯ ಹಿನ್ನೆಲೆಯಲ್ಲಿ 41 ಕೆನಡಿಯನ್ ರಾಜತಾಂತ್ರಿಕರನ್ನು ಭಾರತದಿಂದ ವಾಪಸು ಕರೆಸಿಕೊಳ್ಳಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಮೆಲೈನ್ ಜೋಲಿ ಗುರುವಾರ ಪ್ರಕಟಿಸಿದ್ದಾರೆ.
ಶುಕ್ರವಾರದ ರಾಜತಾಂತ್ರಿಕರ ಅಧಿಕೃತ ಸ್ಥಾನಮಾನವನ್ನು ರದ್ದುಪಡಿಸಿರುವ ಭಾರತದ ಕ್ರಮ ಅತಾರ್ಕಿಕ ಹಾಗೂ ಹಿಂದೆಂದೂ ಕಂಡರಿಯದ ಕ್ರಮ ಎಂದು ಅವರು ಹೇಳಿದ್ದಾರೆ. ಜತೆಗೆ ಇದು ರಾಜತಾಂತ್ರಿಕ ಸಂಬಂಧಗಳ ಕುರಿತ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಭಾರತದ ಈ ಕ್ರಮ ನಮ್ಮ ರಾಜತಾಂತ್ರಿಕ ಸಿಬ್ಬಂದಿಯ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ, ಅವರು ಭಾರತದಿಂದ ಸುರಕ್ಷಿತವಾಗಿ ವಾಪಸ್ಸಾಗಲು ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
“ರಾಜತಾಂತ್ರಿಕ ವಿಶೇಷ ಹಕ್ಕುಗಳ ರೂಢಿ ತಪ್ಪಲು ನಾವು ಅವಕಾಶ ಮಾಡಿಕೊಟ್ಟರೆ, ಭೂಮಂಡಲದ ಯಾವ ರಾಜತಾಂತ್ರಿಕರೂ ಸುರಕ್ಷಿತವಲ್ಲ. ಈ ಕಾರಣದಿಂದ ನಾವು ಪ್ರತಿಯಾಗಿ ಕ್ಮ ಕೈಗೊಂಡಿಲ್ಲ. 41 ಮಂದಿ ರಾಜತಾಂತ್ರಿಕರು 42 ಅವಲಂಬಿತರನ್ನು ಹೊಂದಿದ್ದರು ಎಂದು ವಿವರಿಸಿದ್ದರೆ.
”ಭಾರತದಿಂದ ಅವರ ಸುರಕ್ಷಿತ ನಿರ್ಗಮನವನ್ನು ನಾವು ಸುಗಮಗೊಳಿಸಿದ್ದೇವೆ. ಇದರರ್ಥ ನಮ್ಮ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಈಗ ತೊರೆದಿದ್ದಾರೆ” ಎಂದು ಜೋಲಿ ಹೇಳಿದರು.
ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆ ಹಿಂದೆ ಭಾರತೀಯ ಏಜೆಂಟ್ಗಳ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜೆಸ್ಟಿನ್ ಟ್ರುದೇವ್ ಆಪಾಧಿಸಿದ ಹಿನ್ನೆಲೆಯಲ್ಲಿ ಉದ್ಭವಿಸಿದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕಳೆದ ತಿಂಗಳ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿತಗೊಳಿಸುವಂತೆ ಸೂಚನೆ ನೀಡಿತ್ತು.
ಭಾರತದಿಂದ ಪ್ರತ್ಯೇಕಿಸಲ್ಪಟ್ಟ ಪ್ರತ್ಯೇಕ ಸಿಖ್ ರಾಜ್ಯಕ್ಕಾಗಿ ಪ್ರತಿಪಾದಿಸಿದ ನಿಜ್ಜರ್, ಭಯೋತ್ಪಾದನೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಭಾರತೀಯ ಅಧಿಕಾರಿಗಳಿಗೆ ಬೇಕಾಗಿದ್ದರು.
”ಕೆನಡಾ ಅಂತಾರಾಷ್ಟ್ರೀಯ ಕಾನೂನನ್ನು ರಕ್ಷಿಸುವುದನ್ನು ಮುಂದುವರಿಸುತ್ತದೆ, ಇದು ಎಲ್ಲಾ ರಾಷ್ಟ್ರಗಳಿಗೆ ಅನ್ವಯಿಸುತ್ತದೆ ಮತ್ತು ಭಾರತದೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ” ಎಂದು ಅವರು ಹೇಳಿದರು.
”ಈಗ ನಮಗೆ ನೆಲದ ಮೇಲೆ ರಾಜತಾಂತ್ರಿಕರ ಅಗತ್ಯವಿದೆ ಮತ್ತು ನಾವು ಪರಸ್ಪರ ಮಾತನಾಡಬೇಕಾಗಿದೆ” ಎಂದು ಜೋಲಿ ಹೇಳಿದರು.