ಇಡೀ ಮಂಡ್ಯ ಜಿಲ್ಲೆಯಲ್ಲಿ ಮಳೆ, ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಈ ಸಮಯದಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ, ಬರದ ನೋವು ರೈತರಿಗೆ ತಟ್ಟದಿರಲಿ ಎಂದು ಹಣ ಬಿಡುಗಡೆ ಮಾಡಿ ನೀರು, ಮೇವು ಇತ್ಯಾದಿಗಳಿಗೆ ಬಳಸುವಂತೆ ಹೇಳಿದೆ, ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್)ವು ಹಾಲಿನ ದರವನ್ನು ಲೀಟರ್ ₹1.50 ಕಡಿಮೆ ಮಾಡಿರುವುದಕ್ಕೆ ಜಿಲ್ಲೆಯ ಹಾಲು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನ್ ಮುಲ್ ಏಕಾಎಕಿ ರೈತರಿಂದ ಖರೀದಿ ಮಾಡುವ ಹಾಲಿಗೆ ಒಂದೂವರೆ ರೂಪಾಯಿ ಕಡಿಮೆ ಮಾಡಿ ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ಗಾಯದ ಮೇಲೆ ಬರೆ ಎಂಬಂತೆ ಮಾಡಿದೆ, ಸಹಕಾರ ವ್ಯವಸ್ಥೆಯ ಮೂಲ ತತ್ವವೇ ”ಒಬ್ಬರಿಂದ ಎಲ್ಲರಿಗಾಗಿ; ಎಲ್ಲರಿಂದಲೂ ಒಬ್ಬನಿಗಾಗಿ” ಎಂಬ ಆಶಯವಾಗಿದೆ, ಆದರೆ ಮನ್ ಮುಲ್ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ರೈತರು ಕಿಡಿಕಾರಿದ್ಧಾರೆ.
ಕಳೆದ ವರ್ಷಗಳಲ್ಲಿ ಮಳೆ ಚೆನ್ನಾಗಿ ಬಂದಿತ್ತು, ಹಾಲು ಉತ್ಪಾದನೆ ಹೆಚ್ಚಾದಾಗ ಮಾತ್ರ ಹಾಲಿನ ದರ ಕಡಿತ ಮಾಡುವುದು ವಾಡಿಕೆ, ಆದರೆ ಈಗ ಬರಗಾಲವಿದ್ದರೂ ಹಾಲಿನ ದರ ಕಡಿತ ಮಾಡಿರುವುದು ಏಕೆ ?
ಇತ್ತೀಚೆಗೆ ಪಶುಸಂಗೋಪನೆ ಸಚಿವರು ರಾಜ್ಯದ ಯಾವುದೇ ಹಾಲು ಒಕ್ಕೂಟಗಳು ದರ ಕಡಿತ ಮಾಡಬಾರದು ಎಂದು ಹೇಳಿದ್ದರೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ದರ ಇಳಿಸಿದೆ. ಬರದ ಸಮಯದಲ್ಲಿ ಸಹಕಾರಿ ವ್ಯವಸ್ಥೆಯ ಮನಮುಲ್ ಹಾಲು ಉತ್ಪಾದಕರ ನೆರವಿಗೆ ಬರಬೇಕಿತ್ತು. ಆದರೆ ರೈತರನ್ನು ಶೋಷಿಸುತ್ತಿರುದು ಸರಿಯಲ್ಲ ಎಂದು ಮದ್ದೂರಿನ ಹಾಲು ಉತ್ಪಾದಕ ಸಂತೋಷ್ ಗೌಡ ಕಿಡಿಕಾರಿದ್ದಾರೆ.
ಮೇವು, ಹಾಲು ಉತ್ಪಾದನ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಇದು ಸ್ವತಃ ಮನಮುಲ್ ಗೆ ಗೊತ್ತಿರುವ ಸತ್ಯ
ಆಗಿದ್ದರೂ ದರ ಕಡಿತ ಮಾಡಿರುವುದು ದುರಂತ. ಸಹಕಾರಿ ವ್ಯವಸ್ಥೆಯ ಮೇಲೆ ಮನಮುಲ್ ಗೆ ನಂಬಿಕೆ ಇದ್ಧರೆ ಈ ಕೂಡಲೇ ದರ ಕಡಿತ ಆದೇಶವನ್ನು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.