ಮದ್ದೂರು ತಾಲೂಕಿನ ಗೆಜ್ಜಲಗೆರೆ ಕೆರೆ ಜಾಗವನ್ನು ಒತ್ತುವರಿದಾರರಿಂದ ಕೂಡಲೇ ತೆರವುಗೊಳಿಸಿ ಕೊಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹಲವು ದಿನಗಳಿಂದ ಕೆರೆ ಒತ್ತುವರಿ ತೆರವುಗೊಳಿಸುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಇದಕ್ಕೆ ಕಾರಣರಾದ ತಹಶೀಲ್ದಾರ್ ಹಾಗೂ ಸರ್ವೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಮಾತನಾಡಿ, 42 ಎಕರೆ ಕೆರೆ ಜಮೀನಿದ್ದು, ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ.
ಈ ಒತ್ತುವರಿ ಜಮೀನನ್ನು ಸರ್ವೆ ಮಾಡಿ ಕೆರೆ ಒತ್ತುವರಿ ಜಾಗವನ್ನು ಬಿಡಿಸಿ ಕೆರೆ ಹೂಳೆತ್ತಲು ಅವಕಾಶ ಮಾಡಿಕೊಡಿ ಎಂದರೂ, ಇದಕ್ಕೆ ಸ್ಪಂದಿಸದ ತಹಶೀಲ್ದಾರ್,ಸರ್ವೆ ಅಧಿಕಾರಿಗಳು,ಆರ್ ಐ,ವಿಎ ಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಲು ತಡವಾಗಿ ಆಗಮಿಸಿದ ಗ್ರೇಡ್ 2 ತಹಶಿಲ್ದಾರ್, ಶಿರಸ್ತೆದಾರ ವಿರುದ್ಧ ಹರಿಹಾಯ್ದರು.
ನಂತರದಲ್ಲಿ ಮನವಿ ಸ್ವೀಕರಿಸಿ ತಹಸೀಲ್ದಾರ್ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಯೋಗೇಶ್, ಗ್ರಾಮದ ಮುಖಂಡರಾದ ಚಂದ್ರಶೇಖರ್, ರಾಮಲಿಂಗಯ್ಯ, ಕುಮಾರ್, ಬಾಬು,ಪ್ರತಾಪ್, ವೀರಪ್ಪ, ನಾಗರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.