ರಾಜ್ಯದ ಅಭಿವೃದ್ಧಿ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಎಂಬುದು ಜನರಿಗೆ ಗೊತ್ತಾಗಿದೆ. ಹಾಗಾಗಿ
2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಲಿದ್ದಾರೆ. ಇದನ್ನು ತಡೆಯಲು ಯಾರಿಂದಲ್ಲೂ ಸಾಧ್ಯವಿಲ್ಲ ಎಂದು ಶಾಸಕ ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಕೌಡ್ಲೆ ಮತ್ತು ಹಳೇಹಳ್ಳಿ ಗ್ರಾಮಗಳಲ್ಲಿ 1.60 ಕೊಟಿ ರೂ. ವೆಚ್ಚದ ಸಿಸಿ ಚರಂಡಿ ಹಾಗೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪಂಚರತ್ನ ಸಂಚಲನ ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆ ಯಾತ್ರೆ ರಾಜ್ಯದಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿದೆ. ಜೆಡಿಎಸ್ 30 ಸ್ಥಾನ ಗೆಲುತ್ತದೆ ಎನ್ನುತ್ತಿದ್ದವರು. ಈಗ 50 ಎನ್ನುತ್ತಿದ್ದಾರೆ. ಜನವರಿ ವೇಳೆಗೆ 150 ಎನ್ನುತ್ತಾರೆ. ಇದಕ್ಕೆ ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕೆ ಹರಿದು ಬರುತ್ತಿರುವ ಜನಸಾಗರೇ ಕಾರಣವಾಗಿದೆ. ಇದನ್ನು ಕಂಡು ವಿರೋಧ ಪಕ್ಷದವರಿಗೆ ಆತಂಕ ಮನೆ ಮಾಡಿದೆ ಎಂದರು.
ಚುಂಚಶ್ರೀ ಸಿಎಂ ಆಗಲ್ಲ
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕಿಂತ ದೊಡ್ಡ ಪಟ್ಟದಲ್ಲಿದ್ದಾರೆ. ಅವರಿಗೆ ಏಕೆ ಸಿಎಂ ಸ್ಥಾನ? ಎಂದರು.
ಯಾವುದೇ ಹುರುಳಿಲ್ಲ
ಕೆಲವರು ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷದಲ್ಲಿ ಕುಳಿತು ನಮ್ಮ ಮೇಲೆ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾವು ವಿರೋಧ ಪಕ್ಷದಲ್ಲಿದ್ದುಕೊಂಡು ನಮ್ಮ ಕೈಲಾದಷ್ಟು ಪ್ರತಿ ಗ್ರಾಮಗಳಿಗೆ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇವೆ. ಈ ಹಿಂದೆ ಇದ್ದಂತಹ ಶಾಸಕರು ಏನು ಕೆಲಸ ಮಾಡಿದ್ದಾರೆ ಎಂದು ಅವರೇ ಪ್ರಶ್ನೆ ಹಾಕಿಕೊಳ್ಳಲಿ ಎಂದು ಪರೋಕ್ಷವಾಗಿ ಚಲುವರಾಯಸ್ವಾಮಿ ಹಾಗೂ ಶಿವರಾಮೇಗೌಡರ ಬಗ್ಗೆ ವ್ಯಂಗ್ಯವಾಡಿದರು. ಮತದಾರರು ಪ್ರಜ್ಞಾವಂತರಿದ್ದು,ಈಗ ಬಂದು ಹಣ ನೀಡಿ ಅಮಿಷ ಒಡ್ಡಿದರೆ, ಮತದಾರರು ಬದಲಾವಣೆಯಾಗುವುದಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಿದರಕೋಟೆ ಕುಶ, ಮುಖಂಡರಾದ ಚಿಕ್ಕೊನಹಳ್ಳಿ ತಮ್ಮಯ್ಯ, ರಾಮಕೃಷ್ಣ, ಸಿದ್ದಲಿಂಗಯ್ಯ, ಚಂದ್ರು, ಹೊಂಬಾಳೆ ಚೇತನ್, ನಾಗೇಶ್, ಹರೀಶ್, ಶ್ರೀಪತಿ, ಸೋಮ ಹಳೇಹಳ್ಳಿ, ರಾಮಕೃಷ್ಣ, ಸಿದ್ದಲಿಂಗಯ್ಯ, ಹರಳಕೆರೆ ಚಂದ್ರು, ಸ್ವಾಮಿ, ಕೆಂಪರಾಜು, ಗೌರಮ್ಮ ಇತರರು ಉಪಸ್ಥಿತರಿದ್ದರು.