ಸರ್ಕಾರದಿಂದ ರೈತರಿಗೆ ನೀಡಲಾಗುವ ಬರ ಪರಿಹಾರ ಹಣವನ್ನು ರೈತರ ಖಾತೆಗೆ ಜಮೆ ಮಾಡಲು ರೈತರು ಫ್ರೂಟ್ಸ್ ಐ.ಡಿ ಯಲ್ಲಿ ನೊಂದಣಿ ಮಾಡಿಕೊಂಡು ಜಮೀನಿನ ವಿವರ ಅಪ್ ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ನಾಲ್ಕು ದಿನದಲ್ಲಿ ಶೇ 100 ಸಾಧನೆಯಾಗಬೇಕು. ಜಿಲ್ಲೆಯಲ್ಲಿ 16,11,337 ಪ್ಲಾಟ್ ಗಳಿದ್ದು, 12,11,626 ಪ್ಲಾಟ್ ಗಳು ನೊಂದಣಿಯಾಗಿ ಶೇ 75.2 ಸಾಧನೆಯಾಗಿರುತ್ತದೆ. ಬರ ಪರಿಹಾರ ಹಣ ಬಿಡುಗಡೆಯಾದರೆ ಪಾವತಿ ಕೆಲಸ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನೋಂದಣಿ ಕಷ್ಟಕರವಾಗಿರುತ್ತದೆ. ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ನಾಲ್ಕು ದಿನಗಳಲ್ಲಿ ರೈತರ ಪ್ಲಾಟ್ ವಿವರ ಅಪ್ ಲೋಡ್ ಮಾಡಿ ಶೇ 100 ಸಾಧನೆಯಾಗಬೇಕು ಎಂದು ಸೂಚನೆ ನೀಡಿದರು.
ರೈತರಿಗೆ ಹಲವಾರು ಬಾರಿ ಫ್ರೂಟ್ಸ್ ಐ.ಡಿ ಯಲ್ಲಿ ನೋಂದಣಿ ಮಾಡಿಕೊಂಡು ವಿವರ ಅಪ್ ಲೋಡ್ ಮಾಡುವಂತೆ ತಿಳಿಸಲಾಗಿದೆ. ಅದರೂ ಸಹ 3,99,711 ಪ್ಲಾಟ್ ಗಳು ನೊಂದಣಿ ಮಾಡಿಕೊಂಡಿರುವುದಿಲ್ಲ. ರೈತರು ಸಹ ಈ ಬಗ್ಗೆ ಕಾಳಜಿ ವಹಿಸಿ ತಮ್ಮ ಗ್ರಾಮದ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ 4 ದಿನದೊಳಗಾಗಿ ನೊಂದಣಿ ಮಾಡಿಕೊಳ್ಳುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಜಂಟಿ ಕೃಷಿ ನಿರ್ದೇಶಕ ಅಶೋಕ, ತೋಟಗಾರಿಕೆ ಉಪ ನಿರ್ದೇಶಕಿ ರೂಪಶ್ರೀ, ತಹಶೀಲ್ದಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.