ಮಂಡ್ಯ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಪ್ರಸ್ತುತ ಅಧ್ಯಕ್ಷ ಬಿ.ಸಿದ್ದಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ 2.32 ಲಕ್ಷ ರೂ. ಠೇವಣಿ ಹಣವನ್ನು ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆಂದು ಸಂಘದ ಕಾರ್ಯದರ್ಶಿ ಚಿಕ್ಕನಾಗೇಗೌಡ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಠೇವಣಿ ಹಣವನ್ನು ಡ್ರಾ ಮಾಡಿಕೊಂಡು, ಉಳಿತಾಯ ಖಾತೆಗೆ ಜಮೆಯಾಗಿಸಿಕೊಂಡು ಮನಸೋ ಇಚ್ಚೆ ಖರ್ಚು ಮಾಡಿದ್ದಾರೆ, ಇಷ್ಟಲ್ಲದೆ, ಚುನಾವಣೆ ಹೆಸರಲ್ಲಿ ಲಕ್ಷಾಂತರ ರೂ.ಅವ್ಯವಹಾರ ನಡೆಸಿದ್ದು, ಯಾವುದೇ ಖರ್ಚು-ವೆಚ್ಚಕ್ಕೂ ಬಿಲ್ ಒದಗಿಸಿಲ್ಲ ಎಂದು ದೂರಿದರು.
ಕಳೆದ ವರ್ಷ ಡಿಸೆಂಬರ್ನಲ್ಲಿ ಚುನಾವಣೆ ನಡೆದಾಗ 20 ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದ 34 ಅಭ್ಯರ್ಥಿಗಳಿಂದ ತಲಾ 2 ಸಾವಿರ ರೂ.ನಂತೆ 68 ಸಾವಿರ ರೂ. ಠೇವಣಿ ಹಣ ಬಂದಿದೆ, ಅಂತೆಯೇ ಮೂರು ಪದಾಧಿಕಾರಿ ಹುದ್ದೆಗಳಿಗೆ 9 ಸಾವಿರ ರೂ. ಠೇವಣಿ ಹಣ ಸಂದಾಯವಾಗಿದೆ. ನಮ್ಮದೇ ಸಿಂಡಿಕೇಟ್ನ 20 ಸದಸ್ಯರಿಂದ ತಲಾ 5 ಸಾವಿರ ರೂ.ನಂತೆ 1 ಲಕ್ಷ ರೂ.ಹಣವನ್ನು ಸಿದ್ದಯ್ಯ ಸಂಗ್ರಹ ಮಾಡಿಕೊಂಡಿರುತ್ತಾರೆ. ಇಷ್ಟಲ್ಲದೆ, ಚುನಾವಣಾ ಖರ್ಚಿಗೆಂದು 4 ಸದಸ್ಯರಿಂದ 20 ಸಾವಿರ ರೂ. ಮುಂಗಡ ಹಣ ಸಂಗ್ರಹ ಮಾಡಿಕೊಂಡು ದುರ್ಬಳಕೆ ಮಾಡಿದ್ದಾರೆಂದು ದೂರಿದರು. ಅಧ್ಯಕ್ಷ ಬಿ.ಸಿದ್ದಯ್ಯ ಸಂಘದಲ್ಲಿ ದುರಾಡಳಿತ ನಡೆಸುತ್ತಿದ್ದು, ಇವರ ವಿರುದ್ಧ ಕೇಂದ್ರ ಸಂಘವು ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ನಿರ್ದೇಶಕ ನಾಗರಾಜು, ಪದಾಧಿಕಾರಿಗಳಾದ ಮುದ್ದೇಗೌಡ, ವಿ.ಎಸ್.ಸುಂದರ್ ಕುಮಾರ್, ಚಿಕ್ಕಚನ್ನಯ್ಯ, ಹೆಚ್.ಡಿ.ನಿಂಗೇಗೌಡ, ಟಿ.ಕೆ.ಪುಟ್ಟಸ್ವಾಮಿ ಮತ್ತಿತರರಿದ್ದರು.