ಹೆಣ್ಣು ಮಕ್ಕಳ ಆರೋಗ್ಯ ಹಾಗೂ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಪ್ರಮುಖವಾಗಿ ಹೆಣ್ಣು ಮಕ್ಕಳಿಗೆ ತಿಳಿಸಲು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಒಂದು ಉತ್ತಮವಾದಂತಹ ವೇದಿಕೆಯಾಗಿದೆ ಎಂದು ಆರ್.ಸಿ.ಹೆಚ್.ಅಧಿಕಾರಿ ಡಾ.ಅನಿಲ್ ಕುಮಾರ್ ಅವರು ತಿಳಿಸಿದರು.
ಮಂಡ್ಯ ನಗರದ ಸಂತ ಜೋಸೆಫರ ಕಾನ್ವೆಂಟ್ ಶಾಲೆಯಲ್ಲಿ ನಡೆದ ಜಿಲ್ಲಾ ರಕ್ಷಣಾ ಮಕ್ಕಳ ಘಟಕ, ಪೊಲೀಸ್ ಇಲಾಖೆ ಚೈಲ್ಡ್ ಲೈನ್ 1098 ಇವರ ವತಿಯಿಂದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಪ್ರಪಂಚಾದ್ಯಂತ ಇಂದು ನಮ್ಮ ಹಕ್ಕುಗಳು ಎಂಬ ಘೋಷವಾಕ್ಯ ದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಪ್ರಸ್ತುತ ದಿನಮಾನದಲ್ಲಿ ಹೆಣ್ಣು ಮಕ್ಕಳು ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉದಾಹರಣೆಗೆ ಫಲಿತಾಂಶದ ಸಂದರ್ಭದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಎಂಬಂತಹ ಶೀರ್ಷಿಕೆಯನ್ನು ನಾವೆಲ್ಲರೂ ನೋಡಿದ್ದೇವೆ, ಕೇಳಿದ್ದೇವೆ ಎಂದರು.
ಹೆಣ್ಣಾಗಿ ಮತ್ತೊಂದು ಹೆಣ್ಣನ್ನು ರಕ್ಷಣೆ ಮಾಡುವಂತಹ ಕೆಲಸವನ್ನು ಮಾಡಿ. ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಿ ಹೆಣ್ಣು ಮಕ್ಕಳ ಪರವಾಗಿ ನಿಲ್ಲಲು ಅನೇಕ ಗಣ್ಯ ವ್ಯಕ್ತಿಗಳು ಹಾಗೂ ಆರೋಗ್ಯ ಇಲಾಖೆ ಸದಾ ನಿಮ್ಮೊಂದಿಗೆ ಇದೆ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನೇಕ ಕಾರ್ಯಕ್ರಮಗಳು ಇದೆ. ಹದಿಹರೆಯದವರ ಆರೋಗ್ಯ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಥಮಿಕ ಕೇಂದ್ರಗಳಲ್ಲಿ ಸ್ನೇಹಾ ಕ್ಲಿನಿಕ್ ಇದೆ ಎಂದರು.
ಕಾರ್ಯಕ್ರಮದಲ್ಲಿ ಸಂಟ್ ಜೋಸೆಫರ ಕಾನ್ವೆಂಟ್ ಶಾಲೆಯ ಮುಖ್ಯಸ್ಥರಾದ ಸಿಸ್ಟರ್ ಪ್ರಿಡ್ರೋಲಿನ್, ಸಿಡಿಪಿಒ ಹೆಚ್.ಕೆ. ಕುಮಾರಸ್ವಾಮಿ ಸಹಾಯಕ ಸಿಡಿಪಿಓ ಅಂಬಿಕಾ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರ ಗುರು, ಬರ್ಡ್ಸ್ ನೂಡಲ್ಸ್ ಸಂಸ್ಥೆಯ ನಿರ್ದೇಶಕ ಮಿಕ್ಕೇರೆ ವೆಂಕಟೇಶ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಯಗೌರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ, ಜಿಲ್ಲಾ ನೋಡಲು ಸಂಯೋಜಕಿ ಶೋಭಾವತಿ, ಜಿಲ್ಲಾ ಆರೋಗ್ಯ ಅಧಿಕಾರಿ ವೇಣುಗೋಪಾಲ್, ಎಎಸ್ಐ ರಮೇಶ್, ಶಾಲೆಯ ಮುಖ್ಯ ಶಿಕ್ಷಕಿ ಆಲ್ವಿನ್, ಶ್ರುತಿ ಇತರರು ಹಾಜರಿದ್ದರು.