ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಮಂಡ್ಯದಲ್ಲಿ ರೈತರು ಸ್ವಯಂ ಪ್ರೇರಿತರಾಗಿ ಬೀದಿಗೆ ಇಳಿದು ಮಂಗಳವಾರ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆದ ಸಭೆಯನ್ನು ಎಲ್ಲಾ ಹೋರಾಟಗಾರರು ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಒಕ್ಕೊರಲಿನಿಂದ ಖಂಡಿಸಿದರು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯ ಎದುರು ನಡೆದ ಧರಣಿಯಲ್ಲಿ ಎಲ್ಲರೂ ಕಪ್ಪುಪಟ್ಟಿ ಧರಿಸಿ ಪಾಲ್ಗೊಂಡರು.
ಜಿಲ್ಲಾ ಹಿತ ರಕ್ಷಣಾ ಸಮಿತಿ ವತಿಯಿಂದ ರಸ್ತೆ ತಡೆ ಮಾಡಲಾಯಿತು. ಹಳೆ ಮೈ-ಬೆಂ ಹೈವೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕದ್ದು ಮುಚ್ಚಿ ನೀರು ಬಿಟ್ತಾವ್ರಲ್ಲಪ್ಪೋ ಎಂದು ಬಾಯಿ ಬಡಿದುಕೊಂಡು, ವಚನ ಭ್ರಷ್ಟ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆ ಕೂಗಿದರು. ಪ್ರಾಧಿಕಾರ, ರಾಜ್ಯ ಸರ್ಕಾರ ವಿರುದ್ದ ಅನ್ನದಾತರ ಆಕ್ರೋಶ ಕಟ್ಟೆ ಒಡೆಯಿತು.
ಮುಂದಿನ ಕಾವೇರಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ನ ಮಾಜಿ ಶಾಸಕರು, ರೈತ ಮುಖಂಡರು ಭಾಗಿಯಾಗಿದ್ದರು. ಜೆಡಿಎಸ್ ಮಾಜಿ ಶಾಸಕರಾದ ಪುಟ್ಟರಾಜು, ಸುರೇಶ್ಗೌಡ, ಅನ್ನದಾನಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಮಾಜಿ ಸಚಿವ ಆತ್ಮಾನಂದ ಸೇರಿ ಹಲವರು ಭಾಗವಹಿದ್ದರು.
ತಮಿಳುನಾಡಿಗೆ ಬಿಡುತ್ತಿರುವ ನೀರಿನ ಪ್ರಮಾಣವೆಷ್ಟು ?
KRS ಮತ್ತು ಕಬಿನಿ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡಲಾಗಿದೆ, ಎರಡು ಡ್ಯಾಂಗಳಿಂದ 3,834 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ, ನಿನ್ನೆಯಷ್ಟೇ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ CWMA ಆದೇಶ ಹೊರಟಿಸಿತ್ತು, ಈ ಆದೇಶದ ಬೆನ್ನಲ್ಲೆ KRS ಮತ್ತು ಕಬಿನಿಯಿಂದ ನೀರು ಬಿಡುಗಡೆ ಮಾಡಲಾಗಿದೆ. KRS ಡ್ಯಾನಿಂದ 2,171 ಕ್ಯೂಸೆಕ್, ಕಬಿನಿ ಜಲಾಶಯದಿಂದ 1,663 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ. ಎರಡು ಡ್ಯಾಂಗಳಿಂದ ಒಟ್ಟು 3,834 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.