Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಬ್ಬಿಗೆ 4,500 ರೂ. ನಿಗದಿಗೆ ಆಗ್ರಹಿಸಿ ರೈತಸಂಘದಿಂದ ಆಹೋರಾತ್ರಿ ಧರಣಿ

ಪ್ರತಿ ಟನ್ ಕಬ್ಬಿಗೆ 4,500 ದರ ನಿಗಧಿ ಸೇರಿದಂತೆ ಎಸ್.ಎ.ಪಿ.ಬೆಲೆ ನೀಡುವಂತೆ ಒತ್ತಾಯಿಸಿ ಮಂಡ್ಯನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ನ.7ರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ  ಎ.ಎಲ್.ಕೆಂಪೂಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಮುಖ್ಯಮಂತ್ರಿಗಳು ನೀಡಿದ ಭರವಸೆ ಹುಸಿಯಾಗಿದೆ, ಈ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದೆ, ಕಳೆದ ಜು.11ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೀಘ್ರದಲ್ಲೇ ಎಸ್ಎಪಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಅಲ್ಲದೆ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಬಳಕೆದಾರರ ಬಿಲ್ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರೂ, ಆದರೆ ಇವ್ಯಾವು ಈಡೇರಿಲ್ಲ, ಜಿಲ್ಲೆಯ ವಿವಿಧೆಡೆ ಸೆಸ್ಕ್‌ ಕಂಪನಿಯ ನೌಕರರ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಬಡವರಿಗೆ ತೊಂದರೆ ನೀಡುತ್ತಿದ್ದಾರೆಂದು ದೂರಿದರು.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಪ್ರತಿಭಟನೆ ನಡೆಸಿದಾಗ ಅವರು ಟನ್ ಕಬ್ಬಿಗೆ 150 ರೂ. ಎಸ್ಎಪಿ ಘೋಷಣೆ ಮಾಡಿದ್ದರು. ಆದರೆ ಈ ವರ್ಷ ದಸರಾ ಸಂದರ್ಭದಲ್ಲಿ ಮಂಡ್ಯ-ಮೈಸೂರು ಜಿಲ್ಲೆಯ 8 ಕಡೆ ರೈತರು ರಸ್ತೆ ತಡೆ ನಡೆಸಿದರೂ, ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ನೀಡಿದ ಭರವಸೆ ಹುಸಿಯಾಗಿದೆ. ಅಲ್ಲದೆ ಸಕ್ಕರೆ ಸಚಿವರು ದೀಪಾವಳಿಗೆ ಸಿಹಿ ಸುದ್ದಿ ನೀಡುವುದಾಗಿ ಹೇಳಿದದ್ದರೂ, ಅದು ನೆರವೇರಲಿಲ್ಲ. ಆದ್ದರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.

ಪಶು ಆಹಾರದ ಬೆಲೆ 125 ರೂ.ಹೆಚ್ಚಳ

ಹಾಲಿಗೆ ಕೇವಲ 1 ರೂ.ಹೆಚ್ಚಳ ಮಾಡಿ, ಪಶು ಆಹಾರದ ಬೆಲೆಯನ್ನು ಏಕಾಏಕಿ 125 ರೂ.ಗೆ ಏರಿಸುವ ಮೂಲಕ ಮುನ್ಮುನ್ ರೈತರಿಗೆ ಬರೆ ಹಾಕಿದೆ, ಪಕ್ಕದ ರಾಜ್ಯದವರು ಲೀಟರ್ ಹಾಲಿಗೆ ಯಾವುದೇ ಪರೀಕ್ಷೆ ಮಾಡದೆ 40 ರೂ.ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಆದರೆ ಮನ್ ಮುಲ್ ಲೀಟರ್ ಹಾಲಿಗೆ 29 ರೂ. ನೀಡುವ ಮೂಲಕ ರೈತರನ್ನು ವಂಚಿಸುತ್ತಿದೆ ಎಂದು ದೂರಿದರು.

ತಹಶೀಲ್ದಾರ್ ಪರ ಪ್ರತಿಭಟನೆಯಲ್ಲಿ ಗಣಿಧಣಿಗಳ ಪ್ರಭಾವ 

ತಹಶೀಲ್ದಾರ್ ಕುಂಞ ಅಹಮದ್ ಅವರು ಆರ್.ಟಿ.ಐ ಕಾರ್ಯಕರ್ತ ರವೀಂದ್ರ ಅವರ ಮೇಲೆ ಸುಳ್ಳು ಮೊಕದ್ದಮೆ ಹೂಡಿರುವುದು ಸಮಂಜಸವಲ್ಲ, ಈ ಮೊಕದ್ದಮೆಯನ್ನು ವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರವೀಂದ್ರ ಅವರು ಕಳೆದ 20 ವರ್ಷಗಳಿಂದ ಆರ್.ಟಿ.ಐ ಕಾರ್ಯಕರ್ತರಾಗಿ ಹೋರಾಟ ನಡೆಸುತ್ತಿದ್ದಾರೆ, ಅವರೆಂದಿಗೂ ಯಾರೊಂದಿಗೂ ಶಾಮೀಲಾಗಿಲ್ಲ, ಆದರೆ ತಹಶೀಲ್ದಾರ್ ಪರವಾಗಿ ನಡೆದ ಪ್ರತಿಭಟನೆಯನ್ನು ಗಮನಿಸಿದರೆ ಅವರ ಹಿಂದೆ ಜಿಲ್ಲೆಯ ಗಣಿಧಣಿಗಳ ಪ್ರಭಾವ ಇದೆ ಎನ್ನುವ ಅನುಮಾನ ಉಂಟಾಗುತ್ತದೆ ಎಂದರು.

ತಹಶೀಲ್ದಾರ್ ಹಾಗೂ ರವೀಂದ್ರ ಅವರ ಪ್ರಕರಣಗಳ ಸತ್ಯಾಸತ್ಯಾತೆಗಳು ತಿಳಿದು ಬರಲು ಪ್ರಾಮಾಣಿಕವಾದ ತನಿಖೆ ನಡೆಯಬೇಕು, ಜಿಲ್ಲಾಡಳಿತ ನ್ಯಾಯಯುತವಾಗಿ ತನಿಖೆ ನಡೆಸಿ ಸತ್ಯವನ್ನು ಜನರ ಮುಂದಿಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್, ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಪ್ರಸನ್ನ, ಶಿವಳ್ಳಿ ಚಂದ್ರಶೇಖರ್, ರವಿಕುಮಾರ್, ಕುಮಾರ್, ಮುಟ್ಟನಹಳ್ಳಿ ವೆಂಕಟೇಶ್ ಉಪಸ್ಥಿತರಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!