ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಯಾವುದೇ ಅಖಾಡಗಳ ಸಾಧು-ಸಂತರು ಭಾಗವಹಿಸುತ್ತಿಲ್ಲ.
ಕುಂಭಮೇಳದ ಪ್ರಮುಖ ಆಕರ್ಷಣೆಯೆಂದರೆ ಸಾಧು-ಸಂತರು.ಆದರೆ ಅವರಿಲ್ಲದೆ ಇಲ್ಲಿಯ ಸ್ಥಳೀಯ ಸ್ವಾಮೀಜಿಗಳನ್ನು ಕರೆತಂದು ಕುಂಭಮೇಳ ಮಾಡಲಾಗುತ್ತಿದೆ.ಸಾಧು-ಸಂತರ ಕುಂಭಮೇಳ ಬಿಜೆಪಿ ಮೇಳವಾಗಿ ಮಾರ್ಪಟ್ಟಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಕುಂಭಮೇಳದ ಮುಖ್ಯ ಆಕರ್ಷಣೆಯೇ ಇಡೀ ದೇಶದ ಎಲ್ಲಾ ಭಾಗಗಳಿಂದ ಭಾಗವಹಿಸುವ ಸಾಧು- ಸಂತರ ಅಖಾಡಗಳು.
ವೈಷ್ಣವ, ಶೈವ ಮತ್ತು ಉದಾಸೀನ ಪಂಥದ ಸಾವಿರಾರು ಸಾಧುಗಳು ಈ ಅಖಾಡಗಳ ಮೂಲಕ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಜಮಾಯಿಸುತ್ತಾರೆ.
ಆದರೆ ಕೆ.ಆರ್.ಪೇಟೆಯಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಶೈವ, ವೈಷ್ಣವ ಮತ್ತು ಉದಾಸೀನ ಪಂಥದ ಸಾಧು ಸಂತರು ಭಾಗವಹಿಸುವ ಯಾವುದೇ ಲಕ್ಷಣಗಳು ಕಂಡುಬಾರದೇ ಇರುವುದರಿಂದ ಆಯೋಜಕರು ಇದಕ್ಕೆ ಪರ್ಯಾಯವಾಗಿ ಜನ ಸೇರಿಸಲು ಸ್ತ್ರೀ ಶಕ್ತಿ ಸಂಘಗಳ ಮೊರೆಹೋಗಿದ್ದು, ಇದು ಕಟ್ಟರ್ ಸಾಧು ಸಂತರನ್ನು ಸಿಟ್ಟಿಗೇಳುವಂತೆ ಮಾಡಿದೆ.