ಮಹಿಳೆ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಕೌಶಲ್ಯಾಧಾರಿತ ಸ್ವ-ಉದ್ಯೋಗ ಅವಶ್ಯಕ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮೂರ್ತಿ ಹೇಳಿದರು.
ಮಂಡ್ಯ ನಗರದಲ್ಲಿರುವ ನೆಹರು ಯುವ ಕೇಂದ್ರ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ನೆಹರು ಯುವ ಕೇಂದ್ರ ಜಿಲ್ಲಾ ಶಾಖೆ, ಅನನ್ಯ ಹಾರ್ಟ್ ಸಂಸ್ಥೆ, ಅಕ್ಷಯ ಸಿರಿ ಚಾರಿಟಬಲ್ ಟ್ರಸ್ಟ್, ರೂಪಶ್ರೀ ಮಹಿಳಾ ಮತ್ತು ಗ್ರಾಮೀಣ ಅಭೀವೃದ್ದಿ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಬ್ಯೂಟಿಪಾರ್ಲರ್ ಮತ್ತು ಲೇಡಿಸ್ ಟೈಲರಿಂಗ್ ತರಬೇತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರಷ್ಟೆ ಸಮಾನ ಅವಕಾಶವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ, ಶಿಕ್ಷಣಾಧಾರಿತ, ಕೌಸಲ್ಯಾಧಾರಿತ ಉದ್ಯೋಗಗಳಲ್ಲಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ.
ಮಹಿಳೆಯರು ಆರ್ಥಿಕವಾಗಿ ಮುಂದೆ ಬಂದರೆ ಸರ್ವತೋಮುಖ ಅಭಿವೃದ್ದಿಗೆ ನಾಂದಿಯಾಗುತ್ತದೆ, ಸಮಾಜದಲ್ಲಿ ಪುರುಷರಿಗಿಂತ ಏನೂ ಕಡಿಮೆ ಇಲ್ಲ, ಹತ್ತು ಹಲವು ತರಬೇತಿ ಕಾರ್ಯಕ್ರಮಗಳು ಲಭ್ಯವಿವೆ, ಉತ್ತಮ ಬೆಳೆವಣಿಗಾಗಿ ಸದುಪಯೋಗಪಡಿಸಿಕೊಳ್ಳಿ ಎಂದರು.
ರಾಜ್ಯ ಸರ್ಕಾರವು ನೂತನವಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.ಬರುತ್ತದೆ, ಸರ್ಕಾರಿ ಸ್ವಾಮ್ಯದ ನೊಂದಣಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ, ಉಚಿತವಾಗಿ ನೋದಣಿ ಕಾರ್ಯವಿದೆ, ಯಾರೂ ಒಂದು ರೂಪಾಯಿಯನ್ನು ಕೊಡದೆ, ದಿನಕ್ಕೆ 60 ಮಂದಿ ಮಾತ್ರ, ಒಂದು ನೊಂದಣಿ ಕೇಂದ್ರದಲ್ಲಿ ನೋಂದಾಯಿಸಲು ಅವಕಾಶ ನೀಡಲಾಗಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸುಮಾರು 110ಕ್ಕೂ ಹೆಚ್ಚು ಮಹಿಳೆಯರು ಸ್ವ-ಉದ್ಯೋಗ ತರಬೇತಿಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಿಂದ ಬ್ಯೂಟಿ ಪಾರ್ಲರ್ ಮತ್ತು ಲೇಡಿಸ್ ಟೈಲರಿಂಗ್ ಬಗ್ಗೆ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷೆ ಅನುಪಮಾ, ಜಿಲ್ಲಾ ಕೌಶಲ್ಯ ಅಭಿವೃದ್ದಿ ಅಧಿಕಾರಿ ಎನ್.ಆರ್.ವೇಣು ಗೋಪಾಲ್, ರೋಟರಿ ಜಿಲ್ಲಾ ನಿರ್ದೇಶಕ ಹೊನ್ನೇಗೌಡ, ಅಕ್ಷಯಸಿರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಲಕ್ಕಪ್ಪ, ರೂಪಶ್ರೀ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ರಾಜೇಶ್ ಆಚಾರ್, ರೋಟರಿ ಕಾರ್ಯದರ್ಶಿ ರಾಜೇಶ್, ಎನ್ವೈಕೆ ಲೆಕ್ಕಾಧಿಕಾರಿ ರವಿಚಂದ್ರ, ಶಿಕ್ಷಕಿ ಸುವರ್ಣ, ಪವಿತ್ರ ಮತ್ತಿತರರಿದ್ದರು.