ಬಿಜೆಪಿ ಸರ್ಕಾರ ಇಂದಿನ ಮಕ್ಕಳಿಗೆ ಪಠ್ಯ ಪುಸ್ತಕದ ಮೂಲಕ ಜ್ಞಾನವಿಕಾಸ ಮಾಡುವ ಬದಲು ಧರ್ಮ, ಹಿಂದುತ್ವ ಬೋಧನೆ ಮಾಡುವ ಮೂಲಕ ಮಕ್ಕಳ ಮನಸ್ಸಿನಲ್ಲಿ ವಿಷ ತುಂಬಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಮಂಡ್ಯ ನಗರದ ಚಂದ್ರದರ್ಶನ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮಧು ಜಿ. ಮಾದೇಗೌಡರ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಭಕ್ತ ಭಗತ್ ಸಿಂಗ್, ಸಮಾಜ ಸುಧಾರಕ ನಾರಾಯಣ ಗುರು ಅವರನ್ನು ಪಠ್ಯದಿಂದ ತೆಗೆದು ಹಾಕಿ ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್ ಅವರನ್ನು ಸೇರಿಸಲಾಗಿದೆ. ಬಿಜೆಪಿ ಪಕ್ಷದ ಒಬ್ಬನೇ ಒಬ್ಬ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಹೆಡ್ಗೆವಾರ್ ಅವರನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲು ಅವರೇನು ಸ್ವಾತಂತ್ರ್ಯ ಹೋರಾಟಗಾರನಾ ಎಂದು ಪ್ರಶ್ನಿಸಿದರು.
ಹೆಡ್ಗೆವಾರ್ ಒಂದು ದಿನ ಉಪ್ಪಿನ ಸತ್ಯಾಗ್ರಹ ಮಾಡಿದ್ರಾ,ಇಲ್ಲ ಸ್ವಾತಂತ್ರ್ಯಕ್ಕಾಗಿ 1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ರಾ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸುವ ಬದಲು ಅದನ್ನು ಹತ್ತಿಕ್ಕಲು ಬ್ರಿಟಿಷರ ಜೊತೆ ಶಾಮೀಲಾದ ವ್ಯಕ್ತಿಯ ಇತಿಹಾಸವನ್ನು ನಮ್ಮ ಮಕ್ಕಳು ಇಂದು ಕಲಿಯಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತ್ಯಾಗ,ಬಲಿದಾನದಿಂದ ಈ ದೇಶ ಉಳಿದಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಅಂಬೇಡ್ಜರ್ ಮೂಲಕವೇ ಸಂವಿಧಾನ ರಚನೆ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿಯವರಿಂದ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ದೇಶಭಕ್ತಿ ಎಂಬುದು ಕಾಂಗ್ರೆಸ್ ಪಕ್ಷದಲ್ಲಿ ರಕ್ತಗತವಾಗಿ ಬಂದಿದೆ ಎಂದರು
ಬಿಜೆಪಿ ಸರ್ಕಾರ ನ್ಯಾಷನಲ್ ಎಜುಕೇಶನ್ ಪಾಲಿಸಿ ಮಾಡುವ ಬದಲು ನಾಗಪುರ ಎಜುಕೇಶನ್ ಪಾಲಿಸಿ ಮಾಡಲು ಹೊರಟಿದೆ. ಕುವೆಂಪು ಅವರನ್ನು ಅಪಹಾಸ್ಯ ಮಾಡಲಾಗುತ್ತಿದೆ. ಮಕ್ಕಳಲ್ಲಿ ಜ್ಞಾನ ವಿಕಾಸ ಮಾಡುವ ಬದಲು ವಿಷ ತುಂಬಲಾಗುತ್ತಿದೆ.
ಕಾಂಗ್ರೆಸ್ ಪಕ್ಷ ಎಂದಿಗೂ ಹೀಗೆ ಮಾಡಿಲ್ಲ. ಆದ್ದರಿಂದ ಬಿಜೆಪಿ ಪಕ್ಷವನ್ನು ಸೋಲಿಸಬೇಕು. ಇದು ಜೆಡಿಎಸ್ ಪಕ್ಷದಿಂದ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.