ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿಯ ಬಳಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಿಸುತ್ತಿರುವ ಬಡಾವಣೆಗೆ ಶ್ರೀ ಡಾ. ಬಾಲಗಂಗಾಧರ ನಾಥ ಸ್ವಾಮೀಜಿ ನಗರ ಎಂದೂ ಪ್ರಮುಖ ರಸ್ತೆಗೆ ಡಾ. ಅಂಬರೀಶ್ ಅವರ ರಸ್ತೆ ಎಂದು ಹೆಸರು ಇಡಲು ನಿರ್ಧಾರ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಮಂಡ್ಯ ಜಿಲ್ಲೆಯ ಜನತೆಯ ಪರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಧನ್ಯವಾದ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಈ ಇಬ್ಬರು ಮಹನೀಯರ ಹೆಸರು ಶಾಶ್ವತವಾಗಿ ಉಳಿಯಲು ತೆಗೆದುಕೊಂಡಿರುವ ನಿರ್ಧಾರವು ಅತ್ಯುತ್ತಮ ಹಾಗೂ ಶ್ಲಾಘನೀಯವಾಗಿದೆ. ಈ ಕ್ರಮವನ್ನು ತೆಗೆದುಕೊಂಡ ಸಿಎಂ ಹಾಗೂ ಡಿಸಿಎಂ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.