ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಸಿದ ಪ್ರಥಮ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಸರ್ವೋದಯ ಕರ್ನಾಟಕ ಪಕ್ಷದಿಂದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಎಸ್.ಸಿ.ಮಧುಚಂದನ್ ಭಾಜನರಾಗಿದ್ದಾರೆ.
ಶನಿವಾರ ಆನ್ಲೈನ್ ಮೂಲಕ ನಾಮಪತ್ರ (ಇ- ನಾಮಿನೇಷನ್) ಸಲ್ಲಿಸಿದ ಅವರು ಚುನಾವಣಾ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿದ್ದಾರೆ.
ಇದೇ ಮೊದಲ ಬಾರಿಗೆ ಭಾರತ ಚುನಾವಣಾ ಆಯೋಗ ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಸುವ ಅವಕಾಶ ನೀಡಿದ್ದು ಸುವಿಧಾ (suvidha.eic.gov.in) ಪೋರ್ಟಲ್ ಸೃಷ್ಟಿಸಿದೆ. ಆ ಮೂಲಕ ಎಸ್.ಸಿ.ಮಧುಚಂದನ್ ಫಾರಂ 2ಎ ಅಡಿ ನಾಮಪತ್ರ, ಫಾರಂ 26 ಅಡಿ ಆಸ್ತಿ ವಿವರ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ದೇಶದ ಇತಿಹಾಸದಲ್ಲಿಯೇ ನಾನು ಮೊದಲ ಬಾರಿಗೆ ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಸಿದ್ದೇನೆ. ಇದುವರೆಗೆ ಚುನಾವಣಾ ಆಯೋಗ ನೀಡಿದ ಫಾರಂ ಅನ್ನು ಭರ್ತಿ ಮಾಡಿ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ ಈಗ ಚುನಾವಣಾ ಆಯೋಗ ನೀಡಿರುವ ಈ ಅವಕಾಶದಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಆನ್ಲೈನ್ನಲ್ಲಿ ನೋಟರಿ ಪ್ರಮಾಣೀಕೃತ ದಾಖಲಾತಿ ಸಲ್ಲಿಸುವ ಅವಶ್ಯಕತೆ ಇಲ್ಲ. ಸುವಿಧಾ ಪೋರ್ಟ್ಲ್ನಲ್ಲಿ ಸಲ್ಲಿಸಿದ ದಾಖಲಾತಿ ಪ್ರಿಂಟ್ ಪಡೆದು ಬಿ.ಫಾರಂನೊಂದಿಗೆ ಚುನಾವಣಾಧಿಕಾರಿಗೆ ತಲುಪಿಸಿದರೆ ಸಾಕು,ನಾಮಪತ್ರ ಸ್ವೀಕೃತವಾಗುತ್ತದೆ ಎಂದು ಎಸ್.ಸಿ.ಮಧುಚಂದನ್ ನುಡಿ ಕರ್ನಾಟಕ.ಕಾಂ ಗೆ ತಿಳಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾದ ನಾನು ಭಾರತದಲ್ಲಿಯೇ ಇ-ನಾಮಪತ್ರ ಸಲ್ಲಿಸಿದ ಮೊದಲ ಅಭ್ಯರ್ಥಿ ಆಗಿರುವುದು ಸಂತಸ ತಂದಿದೆ ಎಂದರು.
21.31 ಕೋಟಿ ಆಸ್ತಿ
ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಮಧುಚಂದನ್ ಬಳಿ 21.31 ಕೋಟಿ ಆಸ್ತಿ ಇದೆ ಎಂದು ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಬಿ.ಇ (ಇ&ಸಿ)ಪದವಿ ಪಡೆದಿರುವ ಅವರ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. 11,09,00,000 ರೂ. ಸ್ಥಿರಾಸ್ತಿ ಹಾಗೂ 10,22,70,068 ಚರಾಸ್ತಿ ಹೊಂದಿರುವ ಅವರ ಬಳಿ ಮೂರು ವಾಹನಗಳಿವೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.