ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಪರಿಶಿಷ್ಟ ಮಹಿಳೆಯೊಬ್ಬರು ನೀರು ಕುಡಿದ ಒಂದೇ ಕಾರಣಕ್ಕೆ ಟ್ಯಾಂಕ್ ನೀರನ್ನೆಲ್ಲವನ್ನೂ ಹೊರಕ್ಕೆ ಹರಿಸಿ, ಗೋಮೂತ್ರದಿಂದ ಶುದ್ದೀಕರಿಸಿರುವ ಪ್ರಕರಣ ನಡೆದಿದೆ.
ಟ್ಯಾಂಕ್ ನ ಎಲ್ಲ ನಲ್ಲಿಗಳಿಂದಲೂ ನೀರನ್ನು ಹರಿಸುತ್ತಿರುವ ವಿಡಿಯೊ ಎಲ್ಲಡೆ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯು ತಾಲ್ಲೂಕು ಆಡಳಿತದ ಗಮನಕ್ಕೆ ಬಂದಿದ್ದು, ಸ್ಥಳೀಯ ಕಂದಾಯ ನಿರೀಕ್ಷಕ ಅಧಿಕಾರಿಗಳು ಸೇರಿ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ತಹಶೀಲ್ದಾರ್ಗೆ ವರದಿ ನೀಡಿದ್ದಾರೆ.
ತಳ ಸಮುದಾಯದ ಸುಮಾರು 20 ಯುವಕರು ಘಟನೆ ಕುರಿತು ಲಿಖಿತವಾಗಿ ದೃಢಪಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ನಡೆದ ಘಟನೆ ನಿಜವೇ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಐ.ಇ.ಬಸವರಾಜು ಪ್ರತಿಕ್ರಿಯಿಸಿದರು.
ಪರಿಶಿಷ್ಟ ಸಮುದಾಯದ ಯುವಕನೊಬ್ಬನ ಮದುವೆಗೆ ವಧುವಿನ ಕಡೆಯವರು ಮಧ್ಯಾಹ್ನ ಊಟ ಮುಗಿಸಿ ಹೋಗುವಾಗ ದಾರಿಯಲ್ಲಿದ್ದ ಸಾರ್ವಜನಿಕ ನೀರಿನ ಟ್ಯಾಂಕ್ ನಿಂದ ನೀರು ಕುಡಿದಿದ್ದಾರೆ.
ಮಾರಿಗುಡಿ ಬಳಿ ಲಿಂಗಾಯತರಿಗೆ ಪರಿಶಿಷ್ಟರೆಂದು ತಿಳಿಯುತ್ತಿದ್ದಂತೆ ಸ್ಥಳೀಯರು ಬೈದಿದ್ದಾರು. ನಂತರ ನೀರು ಖಾಲಿ ಮಾಡಿ ಗಂಜಲ ಹಾಕಿ ಸ್ವಚ್ಛಗೊಳಿಸಿದರು ಎಂದು ಗ್ರಾಮಸ್ಥರೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ.
ಗ್ರಾಮಕ್ಕೆ ತೆರಳಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿ ನೀಡಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಮುದಾಯದವರ ಸಭೆ ನಡೆಸಲಾಗುವುದು’ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.