ಸ್ಕಿಜೋಫ್ರೇನಿಯಾವೊಂದು ತೀವ್ರತರವಾದ ಮಾನಸಿಕ ಕಾಯಿಲೆಯಾಗಿದ್ದು, ಈ ಕಾಯಿಲೆ ಬಗ್ಗೆ ಸಾರ್ವಜನಿಕರಿಗೆ ಅರಿವು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ತಿಳಿಸಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿಗಳು ನಗರದ ಸಂಜಯ್ ವೃತ್ತದಲ್ಲಿ ಜಾಥಾ ಮೆರವಣಿಗೆಗೆ ಚಾಲನೆ ನೀಡಿದರು.
ಈ ಕಾಯಿಲೆಯು 18ರಿಂದ 25 ವರ್ಷದ ವಯೋ ಮಾನದವರಲ್ಲಿ ಹೆಚ್ಚಾಗಿ ಪುರುಷರಲ್ಲಿ ಈ ಕಾಯಿಲೆಯು ಕಂಡು ಬರುತ್ತದೆ. ಹಾಗೆಯೇ 8,050ಕ್ಕೂ ಹೆಚ್ಚು ರೋಗಿಗಳು ಕಳೆದ ವರ್ಷ ಚಿಕಿತ್ಸೆಯನ್ನು ಪಡೆದಿದ್ದಾರೆ. ಹಾಗಾಗಿ ಈ ಕಾಯಿಲೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಈ ಮಾನಸ್ ಎಂಬ 14416 ಸಹಾಯಕವಾಣಿ ಯನ್ನು ನಿಮಾನ್ಸ್ ಆಸ್ಪತ್ರೆಯ ವತಿಯಿಂದ 24×7 ಕಾರ್ಯನಿರ್ವಹಿಸುತ್ತದೆ, ಇಂತಹ ರೋಗಿಗಳು ಕಂಡು ಬಂದಲ್ಲಿ ಅವರ ಚಿಕಿತ್ಸೆಯೂ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ ಎಂದರು.
ಈ ಕಾಯಿಲೆಗೆ ಯಾವುದೇ ಚಿಕಿತ್ಸೆಯಿಲ್ಲ ಎಂದು ಭಯ ಪಡಬಾರದು. ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಹೊಸ ಸಂಶೋಧನೆಗಳು ಆಗಿದ್ದು, ಪ್ರತಿಯೊಂದು ಕಾಯಿಲೆಗೂ ಔಷಧಿ, ಚಿಕಿತ್ಸೆ ಲಭ್ಯವಿದೆ. ಸಾರ್ವಜನಿಕರು ಅನಗತ್ಯವಾಗಿ ಯಾವುದೇ ರೀತಿಯ ಮೂಡನಂಬಿಕೆ, ಕಂದಾಚಾರಗಳಿಗೆ ಒಳಗಾಗಬಾರದೆಂದು ಅವರು ತಿಳಿಸಿದರು.
ಕಾಯಿಲೆಯ ನಿಯಂತ್ರಣದಲ್ಲಿ ಎಲ್ಲರೂ ಸಹಕರಿಸುವ ನಿಟ್ಟಿನಲ್ಲಿ ಮತ್ತು ಯುವಕರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಜಾಥಾ ನಡೆಸಲಾಯಿತು ಎಂದರು.
ವಿನಾಕಾರಣ ನಗುವುದು, ಅಳುವುದು, ಒಬ್ಬರೆ ಮಾತನಾಡಿಕೊಳ್ಳುವುದು, ಕಾಲ್ಪನಿಕ ಧ್ವನಿ ಕೇಳಿಸುವುದು, ಕಾರಣವಿಲ್ಲದೆ ಅನುಮಾನ ಪಡುವುದು ಮತ್ತು ಹೆಚ್ಚು ಹೆಚ್ಚು ಮಾದಕ ವಸ್ತುಗಳ ಸೇವನೆ ಮಾಡುವುದು ಈ ರೋಗದ ಲಕ್ಷಣಗಳಾಗಿವೆ. ಆದ್ದರಿಂದ ನಿಯಮಿತ ಔಷಧಿಗಳು, ಆಪ್ತ ಸಮಾಲೋಚನೆ, ಚಿಕಿತ್ಸೆ ಅನುಸರಣೆ ಮತ್ತು ಪುನರ್ವಸತಿಗಳಿಂದ ಈ ಕಾಯಿಲೆಯಿಂದ ಗುಣಮುಖ ಆಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧನಂಜಯ್ ತಿಳಿಸಿದರು.
ಈ ಸಂದರ್ಭದಲ್ಲಿ ಎನ್.ವಿ.ಬಿ.ಡಿ.ಸಿ.ಪಿ ಡಾ.ಭವಾನಿ ಶಂಕರ್, ಡಿಟಿಓ ಡಾ.ಆಶಾಲತಾ, ಡಿ.ಟಿ.ಸಿ. ಡಾ. ಮಮತಾ, ಮನೋವೈದ್ಯರಾದ ಡಾ. ಶಶಾಂಕ್, ಶಿವಾನಂದ. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಗಳ ಮತ್ತಿತರರು ಭಾಗವಹಿಸಿದ್ದರು.