ಸಮಾಜದಲ್ಲಿ ಹೀನ ಸುಳಿಯ ಮನುಷ್ಯರಿರುತ್ತಾರೆ. ಉತ್ತಮ ಚಾರಿತ್ರ್ಯ ಇಲ್ಲದ ನೀಚರು ಮಾತ್ರ ಇಂತಹ ಹೀನ ಕೃತ್ಯವನ್ನು ಎಸಗುತ್ತಾರೆ.
ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಗ್ರಾಮದ ವೀರಪ್ಪ ಗೌಡ ಎಂಬುವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಸುಮಾರು 2000 ಸರ್ವೆ ಸಸಿಗಳನ್ನು ನೆಟ್ಟಿದ್ದರು. 9 ತಿಂಗಳ ಹಿಂದೆ ನೆಟ್ಟಿದ್ದ ಸರ್ವೆ ಸಸಿಗಳು ಚೆನ್ನಾಗಿ ಚಿಗುರೊಡೆದಿತ್ತು. ಆದರೆ ಯಾರೋ ಹೀನ ಸುಳಿಯ ನೀಚರು ಸರ್ವೆ ಗಿಡದ ಸುಳಿಯನ್ನು ಮುರಿದು ರೈತ ವೀರಪ್ಪ ಗೌಡನಿಗೆ ಸುಮಾರು ಐವತ್ತು ಸಾವಿರ ರೂ.ಗಳಷ್ಟು ನಷ್ಟ ಉಂಟುಮಾಡಿದ್ದಾರೆ.
ಈಗಾಗಲೇ ಸಸಿಗಳು ಒಂದು ಮಟ್ಟಕ್ಕೆ ಬೆಳೆದಿರುವುದನ್ನು ಕಂಡ ವೀರಪ್ಪಗೌಡರು ಸರ್ವೆ ಗಿಡ ಚೆನ್ನಾಗಿ ಬರುತ್ತಿದೆ ಎಂದು ಖುಷಿಪಟ್ಟಿದ್ದರು. ಆದರೆ ಕಳೆದ ಭಾನುವಾರ ಕೆಲವು ಕಿಡಿಗೇಡಿಗಳು ವೀರಪ್ಪ ಗೌಡರ ಜಮೀನಿಗೆ ನುಗ್ಗಿ ಸುಮಾರು 500 ಸರ್ವೆ ಗಿಡಗಳನ್ನು ಮುರಿದು ಹಾಕಿದ್ದಾರೆ. ಎದೆಯೆತ್ತರ ಬೆಳೆದ ಸಸಿಗಳನ್ನ ಕಳೆದುಕೊಂಡ ವೀರಪ್ಪಗೌಡರು ಕಂಗಾಲಾಗಿದ್ದಾರೆ.
ಈ ಸಂಬಂಧ ವೀರಪ್ಪಗೌಡ ಕಿರುಗಾವಲು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಕಿರುಗಾವಲು ಪೋಲಿಸರು ಪರಿಶೀಲನೆ ನಡೆಸಿ ಹೋಗಿದ್ದಾರೆ.
ಕಿಡಿಗೇಡಿಗಳ ಹೀನ ಕೃತ್ಯದ ನುಡಿಕರ್ನಾಟಕ.ಕಾಂ ಜೊತೆ ಮಾತನಾಡಿದ ರೈತ ವೀರಪ್ಪಗೌಡ, ಕಳೆದ ಭಾನುವಾರ ಸಂಜೆ 4.30 ರವರೆಗೆ ನಾನು ತೋಟದಲ್ಲಿಯೇ ಕಬ್ಬಿನ ಮುರಿ ಮಾಡುತ್ತಿದ್ದೆ. ಮಳೆ ಬರುವ ಸೂಚನೆ ಇದ್ದರಿಂದ ನಾನು ಮನೆಗೆ ತೆರಳಿದೆ. ಬೆಳಿಗ್ಗೆ ನಮ್ಮ ಪಕ್ಕದ ಜಮೀನಿನವರು ಬಂದು ಸರ್ವೆ ಗಿಡಗಳನ್ನು ಮುರಿದು ಹಾಕಿರುವ ಬಗ್ಗೆ ವಿಷಯ ತಿಳಿಸಿದರು.ನಾನು ಹೋಗಿ ನೋಡಿದಾಗ ಬಹಳ ಚೆನ್ನಾಗಿ ಬೆಳೆದಿದ್ದ ಸುಮಾರು 500ರಷ್ಟು ಸರ್ವೆ ಗಿಡಗಳನ್ನು ಮುರಿದು ಹಾಕಿದ್ದರು. ಸಾವಿರಾರು ರೂಪಾಯಿ ಖರ್ಚು ಮಾಡಿ ಸಸಿಗಳನ್ನು ನೆಟ್ಟಿದ್ದೆ. ಆದರೆ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯದಿಂದ ಸಂಪೂರ್ಣವಾಗಿ ಹಾಳಾಗಿದೆ. ನನಗೆ ಯಾರ ಮೇಲೆಯೂ ಅನುಮಾನವಿಲ್ಲ. ನಾನು ಯಾರೊಂದಿಗೂ ದ್ವೇಷವನ್ನು ಬೆಳೆಸಿಕೊಂಡಿಲ್ಲ.
ಆದರೂ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಪೊಲೀಸರು ಸೂಕ್ತ ತನಿಖೆ ಮಾಡಿ ಈ ಕೃತ್ಯ ಎಸಗಿದವರನ್ನು ಬಂಧಿಸಬೇಕು ಎಂಬುದು ರೈತ ವೀರಪ್ಪಗೌಡರ ಒತ್ತಾಯ. ಕಿರುಗಾವಲು ಪೊಲೀಸರು ಆದಷ್ಟು ಬೇಗ ಇಂತಹ ಕೃತ್ಯ ಎಸಗಿದ ನೀಚರನ್ನು ಬಂಧಿಸಿ ರೈತ ವೀರಪ್ಪ ಗೌಡನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ನುಡಿಕರ್ನಾಟಕ.ಕಾಂ ಆಗ್ರಹಿಸುತ್ತದೆ.