ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಮನೆಗೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ತಮ್ಮ ಸ್ವಗೃಹ ಮಹಾರಾಷ್ಟ್ರದ ಜಲಗಾವ್ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಜ್ಯ ಮೀಸಲು ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಗೋವಿಂದ ಕಪಾಡೆ(39) ತಮ್ಮ ಸರ್ವೀಸ್ ರಿವಾಲ್ವಾರ್ನಿಂದ ಗುಂಡು ಹಾರಿಸಿಕೊಂಡು ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕಾಶ್ ಗೋವಿಂದ್ ಅವರು ಜಮ್ನಾರ್ನಲ್ಲಿನ ತಮ್ಮ ಸ್ವಗೃಹಕ್ಕೆ ಕಳೆದ ವಾರ ತೆರಳಿದ್ದರು. ಪ್ರಾಥಮಿಕ ತನಿಖೆಯಂತೆ ಮಧ್ಯ ರಾತ್ರಿ 1.30ರ ವೇಳೆಯಲ್ಲಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.
ಗುಂಡು ಸಿಡಿದ ಶಬ್ದ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿದ್ದು, ಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕುಳಿಯಲಿಲ್ಲ.
ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದು,ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕಾಶ್ ಗೋವಿಂದ್ 15 ವರ್ಷಗಳ ಹಿಂದೆ ರಾಜ್ಯ ಮೀಸಲು ಪಡೆಗೆ ನಿಯೋಜನೆಗೊಂಡು, ಕಳೆದ ವರ್ಷ ಸಚಿನ್ ತೆಂಡೂಲ್ಕರ್ ಅವರ ಬಾಂದ್ರ ನಿವಾಸಕ್ಕೆ ಭದ್ರತೆಗಾಗಿ ನಿಯೋಜನೆಗೊಂಡಿದ್ದರು.