ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ಸಂಘಗಳ ಸದಸ್ಯರಿಗೆ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಗುಡಿ ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡಲಾಯಿತು.
ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಮಮತಾಶೆಟ್ಟಿ ಉದ್ಘಾಟಿಸಿ ಮಾತನಾಡಿ, ಸ್ವ-ಉದ್ಯೋಗ ತರಬೇತಿಯು ಮಹಿಳೆಯರ ಅಭಿವದ್ಧಿಗೆ ಪೂರಕವಾದ ಒಂದು ಕಾರ್ಯಕ್ರಮವಾಗಿದೆ. ಎಲ್ಲಾ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾದರೆ ಸ್ವ-ಉದ್ಯೋಗ ಸಹಕಾರಿಯಾಗುತ್ತದೆ ಎಂದರು.
ಟೈಲರಿಂಗ್ ತರಬೇತಿ, ಬ್ಯುಟಿಷಿಯನ್ ತರಬೇತಿ, ಊಟದ ಎಲೆ ತಯಾರಿಕೆ, ಪೇಪರ್ ಬ್ಯಾಗ್ ತಯಾರಿಕೆ, ಎಂಬ್ರಾಯಿಡರಿ ಸ್ಯಾರಿ ಕುಚ್ ಹಾಕುವುದು, ಕ್ಯಾಂಡಲ್ ತಯಾರಿಕೆ, ಪೇನಾಯಿಲ್ ತಯಾರಿಕೆ, ಬ್ಲೀಚಿಂಗ್ ಪೌಡರ್ ತಯಾರಿಕೆ, ಗಂಧದ ಕಡ್ಡಿ ತಯಾರಿಕೆ ಇನ್ನು ಮುಂತಾದ ತರಬೇತಿಗಳನ್ನು ಪಡೆದುಕೊಂಡು ಮನೆಯಲ್ಲಿ ತಯಾರಿಸಿ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದರು.
ಸ್ವ-ಉದ್ಯೋಗ ತರಬೇರುದಾರ ಹೊಸಹೊಳಲು ಅಶೋಕ್, ಸರಸ್ವತಿ ಅಶೋಕ್ ಅವರು, ಮಹಿಳೆಯರು ಮನೆಯಲ್ಲಿಯೇ ಬಹು ಸುಲಭವಾಗಿ ಕೈಗೊಳ್ಳಬಹುದಾದ ಕ್ಯಾಂಡಲ್ ತಯಾರಿಕೆ, ಪೇನಾಯಿಲ್, ಆಸಿಡ್ ತಯಾರಿಕೆ, ಬ್ಲೀಚಿಂಗ್ ಪೌಡರ್ ತಯಾರಿಕೆ, ನೊಣ ಮತ್ತು ಸೊಳ್ಳೆ ನಿವಾರಕ ಔಷಧಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷತೆ ತರಬೇತಿ ನೀಡಿದರು.
ತಾಲ್ಲೂಕು ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಎ.ಬಿ.ಕುಮಾರ್ ಮಾತನಾಡಿ, ಈ ಯೋಜನೆಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಏಳಿಗೆಗೆ ಸಹಾಯಕವಾಗಿದೆ. ದೇವಾಲಯಗಳ ಜೀರ್ಣೋದ್ಧಾರಕ್ಕೆ, ಹಾಲಿನ ಡೇರಿಗಳ ನೂತನ ಕಟ್ಟಡಕ್ಕೆ ಧನ ಸಹಾಯ, ಕೆರೆಗಳ ಅಭಿವೃದ್ಧಿ, ಮದ್ಯವ್ಯರ್ಜನ ಶಿಬಿರ, ಉನ್ನತ ವ್ಯಾಸಂಗಕ್ಕೆ ಅರ್ಥಿಕ ನೆರವು, ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಸಾಲ ನೀಡುವ ಮೂಲಕ ಕುಟುಂಬದ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮಹಿಳೆಯರಿಗೆ ವಿಶೇಷವಾಗಿ ಅನುಕೂಲ ಮಾಡಿಕೊಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಶ್ರೀನಿವಾಸ್, ಮುಖಂಡರಾದ ಕರವೇ ಕಾಂತರಾಜು, ಹೊಸಹೊಳಲು ಗೋಪಿ ಮಾತನಾಡಿದರು. ಗ್ರಾ.ಪಂ. ಸದಸ್ಯರಾದ ನೇತ್ರಾವತಿ ರಮೇಶ್, ಜ್ಞಾನ ವಿಕಾಸ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸವಿತಾ, ಜ್ಞಾನ ವಿಕಾಸ ಯೋಜನೆಯ ತಾಲ್ಲೂಕು ಸಮನ್ವಯಾಧಿಕಾರಿ ಕಾವ್ಯ, ಮೇಲ್ವಿಚಾರಕಿ ಯೋಗೇಶ್ವರಿ, ಸೇವಾ ಪ್ರತಿನಿಧಿ ರಜಿನಿ, ಜ್ಞಾನ ವಿಕಾಸ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು