ಕವಿಯಾದವರು ಸಾಮಾಜಿಕ ಕಳಕಳಿ -ಬದ್ಧತೆ -ಸಮಯ ಪ್ರಜ್ಞೆ -ಭಾಷಾ ಪ್ರೌಡಿಮೆಯ ಜೊತೆಗೆ ಕ್ರಿಯಾಶೀಲತೆ ಯಿಂದ -ನವಿರುಭಾವಗಳಿಗೆ ಸೂಕ್ಷ್ಮ ಸಂವೇದನೆ ನೀಡುವ ಮನೋಭಾವನೆ ಬೆಳಸಿಕೊಳ್ಳಬೇಕೆಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ ಅಭಿಪ್ರಾಯಪಟ್ಟರು.
ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅರಕೆರೆ ಹೋಬಳಿ ಕ ಸಾ ಪ ಘಟಕದ ವತಿಯಿಂದ, ಕೊ. ನಾ. ಪು.-55 ಪ್ರಯುಕ್ತ ಅರಕೆರೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ “ಕವಿಗೋಷ್ಠಿ “ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ಕವಿಗಳು ತಮ್ಮ ಕಲ್ಪನೆ -ಭಾವನೆ -ಅನಿಸಿಕೆ -ಸುತ್ತ ಮುತ್ತ ಗಮನಿಸಿದ್ದನ್ನು ಅಕ್ಷರ ರೂಪಕ್ಕಿಳಿಸಿದಾಗ, ಅದನ್ನು ಮತ್ತೇ -ಮತ್ತೇ ತಾವೇ ಓದುವ ಮೂಲಕ ತಿದ್ದುಪಡಿಗೊಳಪಡಿಸಿ, ಅಂತಿಮ ರೂಪ ನೀಡಿದರೆ ಅದೊಂದು ಉತ್ತಮ ಕವಿತೆಯಾಗಿ ಹೊರಹೊಮ್ಮುತ್ತದೆ. ಈ ಬಗ್ಗೆ ಕವಿಗಳು ವಿಶಾಲ ಮನೋಭಾವದಿಂದ ಆಲೋಚಿಸಬೇಕೆಂದರು.
‘ಕಾವ್ಯ ಲಹರಿ’, ‘ನಡೆದಷ್ಟು ದಾರಿ’,’ಪ್ರೇಮ ಲಹರಿ’, ‘ಬೆಸುಗೆ -1-2′,’ಪ್ರಾಯ ಪಿಸುಗುಟ್ಟಿದಾಗ’, ‘ಬರೆದಷ್ಟು ಕವಿತೆ ‘,’ಪುರುಷ ಪಥ ‘,’ವರ್ತುಲ ‘,’ಚಕ್ರತೀರ್ಥ ‘ಹೀಗೆ 22ಕೃತಿಗಳನ್ನು ಬರೆದು ಪ್ರಕಟಿಸಿರುವ ‘ಕೊ ನಾ ಪು’ರವರಿಗೆ ಸರಿಯಾದ ಪುರಸ್ಕಾರ ಸಿಗದಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು
ಕಾರ್ಯಕ್ರಮವನ್ನು ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ, ಕೊನಾಪು ರವರಿಗೆ ಶುಭ ಹಾರೈಸಿದರು.
ಕವಿಗಳಾದ ಲೋಕೇಶ್ ಕಲ್ಕುಣಿರವರ -‘ಅವಮಾನದ ಹೆಣ್ಣಿನ ಕಣ್ಣೀರು’ ಕವಿತೆ ಮಣಿಪುರದಲ್ಲಿ ನಡೆದ ಅತ್ಯಾಚಾರದ ವಿಷಯ ಪ್ರಸ್ತಾಪಿಸಿದಂತಿತ್ತು,,ಕವಿ ಗಾನ ಸುಮ ಪಟ್ಟಸೋಮನಹಳ್ಳಿರವರ ‘ಬೆತ್ತಲಾಗದವರ ನಡುವೆ ಬಟ್ಟೆ ತೊಟ್ಟವರು’ಕವಿತೆ ಇತ್ತೀಚಿನ ಸರ್ಕಾರಗಳ ನಿರ್ಧಾರ ಹಾಗೂ ನಿಲುವುಗಳು ಸಮ-ಸಮಾಜ ನಿರ್ಮಾಣಕ್ಕೆ ಪೂರಕವಾಗಿಲ್ಲದ್ದಕ್ಕೆ ಪ್ರತಿರೋಧ ಎನ್ನುವಂತಿತ್ತು, ಶ್ರೀ ಶಶಿಧರ್ ಸಬ್ಬನಹಳ್ಳಿರವರ ಕವಿತೆ ಸಮಾಜದ ಅಂಕು- ಡೊಂಕು, ಡೋಂಗಿ ರಾಜಕಾರಣದ ಬಗ್ಗೆ ಮೊನಚು ಶಬ್ದಗಳಿಂದ ಟೀಕೆ ಮಾಡುವಂತಿತ್ತು. ಶ್ರೀಮತಿ. ರೇಖಾಶಶಿಧರ್ ರವರು ‘ನಮ್ಮ ದೇಶ’ ಶೀರ್ಷಿಕೆಯ ಸ್ವಾತಂತ್ರ್ಯ ಹೋರಾಟದ ನೆನಪುಗಳ ಬಗ್ಗೆ ಕವಿತೆ ವಾಚಿಸಿದರು
ಇದೆ ಸಂದರ್ಭದಲ್ಲಿ ಕವಿ ಶಶಿಧರ್ ಮತ್ತು ಶ್ರೀಮತಿ ರೇಖಾ ಶಶಿಧರ್ ದಂಪತಿಗಳಿಗೆ ‘ದಾಂಪತ್ಯ ಅನುಸಂಧಾನ’ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಶಿಕ್ಷಕ -ಸಂಘಟಕ -ಕವಿ -ಪ್ರಕಾಶಕ ಕೊಡಗಳ್ಳಿ ಪುರುಷೋತ್ತಮ್ (ಕೊ ನಾ ಪು )ರವರಿಗೆ 55ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ, ಅರಕೆರೆ ಹೋಬಳಿ ತಾ ಕ ಸಾ ಪ ಅಧ್ಯಕ್ಷ ರಾಮಕೃಷ್ಣ, ಶಿಕ್ಷಕಿ ಹಾಗೂ ಕವಯತ್ರಿ ಶ್ರೀಮತಿ ಮಂಜುಳಾರಮೇಶ್,ನಿವೃತ್ತ ಶಿಕ್ಷಕ ಸ್ವಾಮೀನಾಥನ್, ತಾ ಕ ಸಾ ಪ ಮಾಜಿ ಅಧ್ಯಕ್ಷ ಅ. ಸೋಮಶೇಖರ್, ತಾ ಕ ಸಾ ಪ ಗೌರವ ಕಾರ್ಯದರ್ಶಿ ಅನಿಲ್ ಬಾಬುಅರಕೆರೆ, ಶಿಕ್ಷಕ ಶ್ರೀಧರ್ ಹಾಗೂ ಇತರರು ಉಪಸ್ಥಿತರಿದ್ದರು