ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ನದಿ ದಂಡೆಯ ಪಕ್ಕದಲ್ಲಿ ಬೋನಿಗೆ ಬಿದ್ದಿರುವ ಚಿರತೆಗಳನ್ನು ಸ್ಥಳೀಯವಾಗಿ ಬಿಡದೆ ವನ್ಯಜೀವಿ ಧಾಮ ಇಲ್ಲವೇ ಹುಲಿ ರಕ್ಷಿತಾರಣ್ಯಕ್ಕೆ ಬಿಡುವಂತೆ ಜಿಲ್ಲಾ ಅರಣ್ಯಾಧಿಕಾರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸೂಚಿಸಿದ್ದಾರೆ.
ಅಲ್ಲದೆ ಮದ್ದೂರು ತಾಲೂಕು ಹಾಗೂ ಕೆಆರ್ಎಸ್ನಲ್ಲಿ ಇನ್ನೂ ಚಿರತೆಗಳಿದ್ದು, ಅವುಗಳನ್ನೂ ಸೆರೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಾರಸಿಂಗನಹಳ್ಳಿಯಲ್ಲಿ ಇನ್ನೂ ತಾಯಿ ಚಿರತೆ ಸೇರಿದಂತೆ ಗಂಡು ಚಿರತೆ ಇರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ಇನ್ನೂ ಕಾರ್ಯಾಚರಣೆ ನಡೆಸುವ ಅವಶ್ಯಕತೆ ಇದೆ ಎಂದು ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.
ಈ ಬಗ್ಗೆ ಅರಣ್ಯಾಧಿಕಾರಿ ಜತೆ ಮಾತನಾಡಿರುವ ಶಾಸಕರು, ಅರಣ್ಯ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಚಿರತೆಗಳು ಕಂಡರೆ ಜನರು ಏನು ಮಾಡಬೇಕು? ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಯಾರಿಗೆ ಕರೆ ಮಾಡಿ ವಿಷಯ ತಿಳಿಸಬೇಕು ಎಂಬಿತ್ಯಾದಿ ಸಂಗತಿಗಳನ್ನೊಳಗೊಂಡಂತೆ ಅರಣ್ಯ ಇಲಾಖೆ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು ಎಂದು ಶಾಸಕ ದಿನೇಶ್ ಗೂಳಿಗೌಡ ಸೂಚಿಸಿದರು.
ಇದಕ್ಕೆ ಅರಣ್ಯಾಧಿಕಾರಿ ಸ್ಪಂದಿಸಿ,ಅಕ್ಟೋಬರ್, ಡಿಸೆಂಬರ್, ಜನವರಿ ಕಾಲಾವಧಿಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಜನರು ಜಾಗೃತರಾಗಿರಬೇಕು. ತಾವು ಸೂಚನೆ ನೀಡಿದಂತೆ ಅರಿವು ಮೂಡಿಸುವ ಕಾರ್ಯವನ್ನೂ ಇಲಾಖೆ ವತಿಯಿಂದ ಮಾಡುವುದಾಗಿ ತಿಳಿಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.